Shorts

ಬೆಂಗಳೂರು: ಕಿವಿ ಕೇಳಿಸದಿದ್ದರೂ, ಕಣ್ಣು ಮಂಜಾಗಿದ್ದರೂ ತನ್ನ ವಿಭಿನ್ನವಾದ ಹಾವಭಾವದಿಂದಲೇ ಕರ್ನಾಟಕದ ಜನರ ಮನಗೆದ್ದಿದ್ದ ರೀಲ್ಸ್‌ ಅಜ್ಜಿಯೆಂದೇ ಹೆಸರಾಗಿದ್ದ ಲಕ್ಷ್ಮಿ ಅಜ್ಜಿ ಅವರು ಇನ್ನು ನೆನಪು ಮಾತ್ರ. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೆರೆಹೊಸಳ್ಳಿಯ ಲಕ್ಷ್ಮಿ ನಾಯ್ಕ (93) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.ಲಕ್ಷ್ಮಿ ಅಜ್ಜಿ ಅವರು ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅವರು ಅಗಲಿದ್ದಾರೆ. ಇಂದು ಯಲ್ಲಾಪುರದಲ್ಲಿ ಧಾರ್ಮಿಕ ವಿಧಿ ಪ್ರಕಾರ ಅವರ ಅಂತ್ಯಕ್ರಿಯೆ ನೆರವೇರಿತು.ತಮ್ಮ ಮರಿಮೊಮ್ಮಗ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಸೂರಜ್ ಆಚಾರಿ ಹೇಳಿಕೊಟ್ಟಂತೆ ನಟನೆ ಮಾಡುತ್ತಲೇ ಲಕ್ಷ್ಮಿ ಅಜ್ಜಿ ಫೇಮಸ್‌ ಆಗಿದ್ದರು.

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಇಡೀ ವಿಶ್ವವೇ ಸವಾಲುಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಜನರು ವದಂತಿಗಳಿಗೆ ಕಿವಿಗೊಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ಧಾರೆ. ಇಂದಿನ ಸವಾಲುಗಳನ್ನು ಎದುರಿಸಲು ದೇಶದ ಎಲ್ಲ ನಾಗರಿಕರು ಒಗ್ಗೂಡಬೇಕು. ರಾಜ್ಯ ಸರ್ಕಾರಗಳು ಜನತೆಗೆ ಏನೆಲ್ಲ ಸೂಚನೆ, ಮಾಹಿತಿಗಳನ್ನ ಕೊಟ್ಟಿವೆಯೋ ಅವುಗಳ ಮೇಲೆ ವಿಶ್ವಾಸವಿಟ್ಟು ಹೆಜ್ಜೆ ಇಡಬೇಕು ಎಂದು ಮನ್‌ ಕಿ ಬಾತ್‌ನಲ್ಲಿ ಸಲಹೆ ನೀಡಿದ್ದಾರೆ.ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಹಾರ್ಮುಜ್‌ ಜಲಸಂಧಿಯಲ್ಲಿ ಉಂಟಾಗುತ್ತಿರುವ ಪರಿಣಾಮಗಳ ಕುರಿತು ವಿವರಿಸಿದರು. ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ 1 ಕೋಟಿಗೂ ಹೆಚ್ಚು ಭಾರತೀಯರಿಗೆ ಸಾಧ್ಯವಾದ ಎಲ್ಲಾ ಸಹಾಯವನ್ನ ಒದಗಿಸಿರುವುದಕ್ಕೆ ಆ ದೇಶಗಳಿಗೆ ತಮ್ಮ ಧನ್ಯವಾದ ಹೇಳಿದರು.

ಬೆಂಗಳೂರು: ಕರ್ನಾಟಕದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಜೋರು ಮಳೆಯಾಗಲಿದ್ದು, 14 ಜಿಲ್ಲೆಗಳಿಗೆ ವಿವಿಧ ದಿನಗಳಂದು ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಏಪ್ರಿಲ್ 4ರ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಸ್ಥಳೀಯವಾಗಿ ಉಂಟಾಗಿರುವ ಪಶ್ಚಿಮ ಗಾಳಿಯ ಪ್ರಭಾವದಿಂದಾಗಿ ಮಳೆಯಾಗಲಿದೆ. ಶನಿವಾರ ಸಂಜೆ ಬೆಂಗಳೂರಿನ ಕೆಲವಡೆ ಸೇರಿದಂತೆ ಹಲವೆಡೆ ಮಳೆಯಾಗಲಿದೆ. 50 ಕಿಲೋಮೀಟರ್ ವೇಗದಲ್ಲಿ ಬೀಸುವ ಬಿರುಗಾಳಿ, ಗುಡುಗು ಮತ್ತು ಮಿಂಚಿನ ಆರ್ಭಟ ಇರಲಿದೆ.

ಬೆಂಗಳೂರು: ಸ್ಟಾರ್‌ ಜೋಡಿ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಜೋಡಿಯು ಏನೇ ಮಾಡಿದರೂ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತದೆ. ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ವಿರಾಟ್‌ ಕೊಹ್ಲಿ ಅವರು ತನ್ನ ಪತ್ನಿಗೆ ನೀಡಿದ ಫ್ಲೈಯಿಂಗ್ ಕಿಸ್‌ ರೋಮ್ಯಾಂಟಿಕ್ ವಿಡಿಯೋ ಭಾರೀ ವೈರಲ್‌ ಆಗಿದೆ.ಚೊಚ್ಚಲ ಐಪಿಎಲ್‌ ಆಗಿದ ಜೇಕಬ್‌ ಡಫಿ ಮಾರಕ ಬೌಲಿಂಗ್‌ ಬಳಿಕ ದೇವದತ್ತ ಪಡಿಕ್ಕಲ್‌ ಮತ್ತು ವಿರಾಟ್‌ ಕೊಹ್ಲಿಯ ಭರ್ಜರಿ ಬ್ಯಾಟಿಂಗ್‌ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಹಾಲಿ ಐಪಿಎಲ್‌ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡವು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಈ ಪಂದ್ಯದ ಮೂಲಕ ವಿರಾಟ್‌ ಕೊಹ್ಲಿ ಮತ್ತೊಮ್ಮೆ ತಾನು ಅತ್ಯುತ್ತಮ ಚೇಸರ್‌ಗಳಲ್ಲಿ ಒಬ್ಬರೆಂಬುದನ್ನು ಸಾಬೀತುಪಡಿಸಿದ್ದಾರೆ.

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ, ಕ್ರಿಕೆಟ್‌ ದಿಗ್ಗಜ ಮಹೇಂದ್ರ ಸಿಂಗ್‌ ಧೋನಿ ಅವರ ನಿವೃತ್ತಿಯ ಬಗ್ಗೆ ಚರ್ಚೆ ಜೋರಾಗಿದ್ದಾರೆ. 44 ವರ್ಷದ ಧೋನಿ ಐಪಿಎಲ್‌ ಹೊರತುಪಡಿಸಿ ಉಳಿದ ಕ್ರಿಕೆಟ್‌ಗೆ ಈ ಹಿಂದೆಯೇ ವಿದಾಯ ಹೇಳಿದ್ದಾರೆ.ಐಪಿಎಲ್ 2026ನೇ ಆವೃತ್ತಿಯಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡಲಿದ್ದಾರೆ. ಸಂಜು ಸ್ಯಾಮ್ಸನ್‌ ವಿಕೆಟ್‌ ಕೀಪರ್‌ ಹೊಣೆ ನಿರ್ವಹಿಸುವುದರಿಂದ ಈ ಆವೃತ್ತಿಯಲ್ಲಿ ಧೋನಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡವು ಬಳಸಿಕೊಳ್ಳಬಹುದು. ಧೋನಿ ಪಾತ್ರದ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ.2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ‌ ಧೋನಿ ಐಪಿಎಲ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. 44ನೇ ವಯಸ್ಸಿನಲ್ಲಿ, ಧೋನಿ ಈಗಾಗಲೇ ಐಪಿಎಲ್‌ನಲ್ಲಿ ಕಾಣಿಸಿಕೊಂಡ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾಗಿದ್ದು, ಬ್ರಾಡ್ ಹಾಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.