Shorts

ಮಂಗಳೂರು: ಮೂಡುಬಿದಿರೆ ಸರ್ಕಲ್‌ ಇನ್ಸ್​ಪೆಕ್ಟರ್​ ಬಿ.ಜಿ. ಸಂದೇಶ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಶಿಕ್ಷಕಿಯೊಬ್ಬರು ಸಂದೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದ್ದ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಠಾಣೆಯಲ್ಲಿ ಸಂದೇಶ್​​ ವಿರುದ್ಧ ಸಂತ್ರಸ್ತೆ ಶಿಕ್ಷಕಿ ದೂರು ನೀಡಿದ್ದಾರೆ. ಆ ದೂರಿನ ಮೇರೆಗೆ ಅತ್ಯಾಚಾರ ಆರೋಪದಡಿ ಎಫ್​ಐಆರ್​ ದಾಖಲಾಗಿದೆ. 2018 ರಿಂದ 2023ರವರೆಗೆ ಶಿಕ್ಷಕಿ ಮನೆಗೆ ಹೋಗಿ ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.2020ರಲ್ಲಿ ಸಂದೇಶ್​​​ ಬೆಳ್ತಂಗಡಿ ಸರ್ಕಲ್ ವ್ಯಾಪ್ತಿಯಲ್ಲಿರುವ ವೇಣೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್​ಪೆಕ್ಟರ್​​​ ಆಗಿದ್ದರು. ಹೀಗಾಗಿ, ವೇಣೂರು ಠಾಣಾ ವ್ಯಾಪ್ತಿಯಲ್ಲೇ ಅತ್ಯಾಚಾರ ಆರೋಪದಡಿ ಸೆಕ್ಷನ್ 376(2)(a)(1), 376(2)(n), 384, 506ರಡಿ ಕೇಸ್ ದಾಖಲಾಗಿದೆ.

ವಾಷಿಂಗ್ಟನ್: ಹಾರ್ಮುಜ್‌ ಜಲಸಂಧಿಯ ಮೇಲೆ ಹಿಡಿತ ಸಾಧಿಸಿರುವ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಡಕ್ ವಾರ್ನಿಂಗ್‌ ನೀಡಿದ್ದಾರೆ. ಈ ಜಲಸಂಧಿಯನ್ನು 48 ಗಂಟೆಯೊಳಗೆ ಸಂಪೂರ್ಣ ಓಪನ್‌ ಮಾಡುವಂತೆ ದೊಡ್ಡಣ್ಣ ಡೆಡ್‌ಲೈನ್‌ ಫಿಕ್ಸ್‌ ಮಾಡಿದ್ದಾರೆ.ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸುವ ಅತ್ಯಂತ ಪ್ರಮುಖವಾದ ಜಾಗತಿಕ ತೈಲ ಸಾಗಣೆ ಮಾರ್ಗವಾಗಿದೆ. ಇರಾನ್ ಮತ್ತು ಒಮಾನ್/ಯುಎಇ ನಡುವೆ ಇರುವ ಈ ಕಿರಿದಾದ ಜಲಮಾರ್ಗವು ವಿಶ್ವದ ತೈಲ ಮತ್ತು ಅನಿಲದ ಸಾಗಣೆಗೆ ದಾರಿಯಗಿದೆ. ಇದು ಜಾಗತಿಕ ಇಂಧನ ಭದ್ರತೆಗೆ ನಿರ್ಣಾಯಕವಾಗಿದೆ.ಟ್ರಂಪ್ ಅವರ ಎಚ್ಚರಿಕೆಗೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್ ಸೇನೆಯು, ಈ ಪ್ರದೇಶದಲ್ಲಿ ಅಮೆರಿಕಕ್ಕೆ ಸೇರಿದ ಎಲ್ಲಾ ಇಂಧನ, ತಂತ್ರಜ್ಞಾನ ಮತ್ತು ಉಪ್ಪುನೀರಿನ ನಿರ್ಮೂಲನ ಮೂಲಸೌಕರ್ಯಗಳನ್ನು ಟಾರ್ಗೆಟ್‌ ಮಾಡಿ ಹೊಡೆಯುವುದಾಗಿ ಬೆದರಿಕೆ ಹಾಕಿದೆ.

ಬೆಂಗಳೂರು: ಇದೇ 28ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಲಿದೆ. ಮೊದಲ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.ಈ ಪ್ರಯುಕ್ತ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರು ಶನಿವಾರ ತೆರಳಿ, ಬಂದೋಬಸ್ತ್ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು. ಸ್ಟ್ಯಾಂಡ್‌ಗಳು, ಹೋಲ್ಡಿಂಗ್ ಏರಿಯಾ ಮತ್ತಿತರ ಇತರ ಸ್ಥಳಗಳಲ್ಲಿ ಭದ್ರತೆ ಕುರಿತು ಸಮಾಲೋಚನೆ ನಡೆಸಿದರು.ಈ ಮಧ್ಯೆ ಟಿಕೆಟ್ ಖರೀದಿ ಸಂದರ್ಭದಲ್ಲಿ ವಂಚನೆಗಳು ನಡೆಯುವ ಸಾಧ್ಯತೆಯಿದ್ದು, ನಕಲಿ ಲಿಂಕ್ ಗಳು ಅಥವಾ ಕೊನೆ ಕ್ಷಣದ ವ್ಯವಹಾರದ ವಂಚನೆಗಳ ಜಾಲಕ್ಕೆ ಬೀಳದಿರಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕೋಲ್ಕತ್ತ: 2026ನೇ ಋತುವಿನ ಐಪಿಎಲ್‌ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಟೂರ್ನಿಯಲ್ಲಿ ಸ್ಪರ್ಧಿಸುವ ತಂಡವುಗಳು ಈಗಾಗಲೇ ತಾಲೀಮು ಆರಂಭಿಸಿವೆ. ಈ ಮಧ್ಯೆ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡಕ್ಕೆ ಆಘಾತವಾಗಿದೆ. ಮಾರ್ಚ್‌ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಕಾದಾಟ ನಡೆಸುವ ಮೂಲಕ ಐಪಿಎಲ್‌ ಟೂರ್ನಿ ಆರಂಭವಾಗಲಿದೆ.ಟೂರ್ನಿಯ ಆರಂಭಕ್ಕೆ ಕೆಲವು ದಿನಗಳು ಮಾತ್ರ ಬಾಕಿ ಇರುವಂತೆಯೇ ಕೋಲ್ಕತ್ತ ತಂಡ ತನ್ನ ಪ್ರಮುಖ ವೇಗಿ ಹರ್ಷಿತ್ ರಾಣಾ ಅವರನ್ನು ಟೂರ್ನಿಯಿಂದಲೇ ಕಳೆದುಕೊಂಡಿದೆ. ಈ ಹಿಂದೆ ಸ್ನಾಯುರಜ್ಜುವಿನ ಸಮಸ್ಯೆಗೆ ತುತ್ತಾಗಿದ್ದ ತಂಡದ ಸ್ಟಾರ್ ವೇಗಿ ರಾಣಾ, ಇದೀಗ ಇಡೀ ಟೂರ್ನಿಯಿಂದ ಹೊರಗುಳಿಸಿದ್ದಾರೆ.

ಮುಂಬೈ: ದುಡ್ಡು ಕೊಟ್ರೆ ಈತ ನಿಮ್ಮ ಸಮಸ್ಯೆಗಳನ್ನು ಕೇಳಿಸಿಕೊಳ್ಳುತ್ತಾನೆ. ಅದಕ್ಕೆ ಸಮಾಧಾನವನ್ನೂ ಹೇಳುತ್ತಾನೆ. ಇಂತಹದ್ದೊಂದು ಭರ್ಜರಿ ಆಫರ್ ಇರೋದು ಎಲ್ಲಿ ಈ ವಿಡಿಯೋ ನೋಡಿ.ದುಡ್ಡು ಕೊಟ್ರೆ ನೆಮ್ಮದಿ ಸಿಗುತ್ತಾ ಎಂದು ಕೆಲವರು ಕೇಳುತ್ತಾರೆ. ಆದರೆ ಈಗ ನೆಮ್ಮದಿಯನ್ನೂ ದುಡ್ಡು ಕೊಟ್ಟು ಕೊಳ್ಳಬಹುದು ಎಂದು ಈತ ತೋರಿಸಿಕೊಟ್ಟಿದ್ದಾನೆ. ಯಾರಿಗೂ ಹೇಳಲಾಗದೇ ಒದ್ದಾಡುವ ಸಮಸ್ಯೆ, ಕಷ್ಟಗಳಿದ್ದರೆ ಅದನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕು ಎನಿಸುತ್ತದೆ. ಅದನ್ನು ಹಂಚಿಕೊಳ್ಳಲು ಸೂಕ್ತ ವ್ಯಕ್ತಿ ಇಲ್ಲ ಎನಿಸಿದರೆ ಈತನ ಬಳಿ ಹೇಳಬಹುದು. ಮುಂಬೈ ಬೀಚ್ ನಲ್ಲಿ ವ್ಯಕ್ತಿಯೊಬ್ಬ ಕಡ್ಲೆಕಾಯಿ ಮಾರಾಟಕ್ಕೆ ಕೂತ ಹಾಗೆ ಸಮಸ್ಯೆ ಕೇಳಲು ಬೋರ್ಡ್ ಹಾಕಿಕೊಂಡು ಕೂತಿದ್ದಾನೆ. ಈತನ ಬಳಿ ಕಷ್ಟ ಹೇಳಿಕೊಳ್ಳುವುದಕ್ಕೆ ಚಾರ್ಜ್ ಆಗುತ್ತದೆ.

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಗಲ್ಫ್ ಪ್ರದೇಶದಾದ್ಯಂತ ನಡೆದ ಪ್ರತ್ಯೇಕ ಘಟನೆಗಳಲ್ಲಿ ಆರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಹೇಳಿದ್ದಾರೆ. ಸಹಾಯ ಮತ್ತು ವಾಪಸಾತಿಗಾಗಿ ಭಾರತೀಯ ಮಿಷನ್‌ಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿವೆ. ಅಂತರ ಸಚಿವಾಲಯದ ಬ್ರೀಫಿಂಗ್ ಅನ್ನು ಉದ್ದೇಶಿಸಿ ಮಾತನಾಡಿದ ಎಂಇಎ ಹೆಚ್ಚುವರಿ ಕಾರ್ಯದರ್ಶಿ (ಗಲ್ಫ್) ಅಸೀಮ್ ಆರ್ ಮಹಾಜನ್, ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ಮೃತರನ್ನು ಭಾರತಕ್ಕೆ ಹಿಂದಿರುಗಿಸಲು ಹಲವಾರು ದೇಶಗಳಲ್ಲಿನ ಭಾರತೀಯ ಮಿಷನ್‌ಗಳು ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.