Publish Date: Sat, 04 Jan 2025 (11:31 IST)
Updated Date: Sat, 04 Jan 2025 (11:34 IST)
ಬೆಂಗಳೂರು: ಇತ್ತೀಚೆಗಷ್ಟೇ ಕೆಎಂಎಫ್ ನಂದಿನಿ ಬ್ರ್ಯಾಂಡ್ ನ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆದರೆ ಹಿಟ್ಟು ಸಿಗುತ್ತಿಲ್ಲ ಎಂದು ಜನರು, ಸ್ಟಾಕ್ ಬರುತ್ತಿಲ್ಲ ಎಂದು ಕೆಲವು ನಂದಿನಿ ಬೂತ್ ಮಾಲಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ನಂದಿನಿ ಗುಣಮಟ್ಟಕ್ಕೆ ಹೆಸರು ವಾಸಿ. ಹೀಗಾಗಿ ನಂದಿನಿ ಬ್ರ್ಯಾಂಡ್ ನ ದೋಸೆ, ಇಡ್ಲಿ ಹಿಟ್ಟು ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಕೇಳಿಯೇ ಸಾಕಷ್ಟು ಜನ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಅಲ್ಲದೆ ಖರೀದಿಗೆ ಆಸಕ್ತಿ ತೋರಿಸಿದ್ದರು.
ಅದರಂತೆ ಸಿಎಂ ಸಿದ್ದರಾಮಯ್ಯ ಪೌಷ್ಠಿಕಾಂಶಯುಕ್ತ ನಂದಿನಿ ದೋಸೆ ಮತ್ತು ಇಡ್ಲಿ ಹಿಟ್ಟಿನ ಪ್ಯಾಕೆಟ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರಿನ ಅಧಿಕೃತ ನಂದಿನಿ ಬೂತ್ ಗಳಲ್ಲಿ ಮಾತ್ರವೇ ದೋಸೆ ಮತ್ತು ಇಡ್ಲಿ ಹಿಟ್ಟು ಸಿಗುತ್ತಿದೆ.
ಆದರೆ ಇಷ್ಟಕ್ಕೇ ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ. ನಂದಿನಿ ಹಿಟ್ಟಿಗೆ ಭಾರೀ ಬೇಡಿಕೆ ಬಂದಿದ್ದು ಕೆಎಂಎಫ್ ಕೂಡಾ ರಾಜ್ಯ ಇತರೆ ಕೆಲವು ಪ್ರಮುಖ ನಗರಗಳಿಗೂ ವಿಸ್ತರಿಸಲು ತೀರ್ಮಾನಿಸಿದೆ. ಆದರೆ ಬೆಂಗಳೂರಿನಲ್ಲಿ ಬೇಡಿಕೆಯಿದ್ದರೂ ಎಲ್ಲಾ ನಂದಿನಿ ಬೂತ್ ಗಳಲ್ಲಿ ದೋಸೆ, ಇಡ್ಲಿ ಹಿಟ್ಟು ಸಿಗುತ್ತಿಲ್ಲ ಎಂಬ ದೂರು ಗ್ರಾಹಕರಿಂದ ಬಂದಿದೆ. ಕೆಲವು ಪ್ರಮುಖ ಕೇಂದ್ರಗಳಲ್ಲಿ ಮಾತ್ರ ಸೀಮಿತ ಅವಧಿಯಲ್ಲಿ ಮಾತ್ರ ಹಿಟ್ಟು ಮಾರಾಟ ಮಾಡಲಾಗುತ್ತಿದೆ. ಎಲ್ಲಾ ಕೇಂದ್ರಗಳಲ್ಲಿ ಎಲ್ಲಾ ಸಮಯದಲ್ಲೂ ಲಭ್ಯವಾಗುವಂತೆ ಮಾಡಿದರೆ ನಮಗೆ ಅನುಕೂಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು, ಕೆಲವು ನಂದಿನಿ ಬೂತ್ ನವರಿಂದಲೂ ಇದೇ ರೀತಿಯ ಅಳಲು ಕೇಳಿಬರುತ್ತಿದೆ. ಫೋನ್ ಮಾಡುತ್ತಲೇ ಇದ್ದೇವೆ. ನಮಗೆ ಇನ್ನೂ ಸ್ಟಾಕ್ ಬಂದಿಲ್ಲ. ಬಂದರೆ ಚೆನ್ನಾಗಿರುತ್ತದೆ. ಸಾಕಷ್ಟು ಜನ ಬಂದು ಕೇಳ್ತಿದ್ದಾರೆ ಎನ್ನುವ ಅಭಿಪ್ರಾಯ ಬಂದಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನಂದಿನಿ ಹಿಟ್ಟನ್ನು ಇನ್ನಷ್ಟು ಸುಲಭವಾಗಿ ಜನರ ಕೈಗೆಟುಕುವಂತೆ ಮಾಡಲು ಕೆಎಂಎಫ್ ಕ್ರಮ ಕೈಗೊಳ್ಳಬೇಕಾಗಿದೆ.