Publish Date: Thu, 19 Feb 2026 (12:21 IST)
Updated Date: Thu, 19 Feb 2026 (12:24 IST)
ಲಕ್ನೋ: ಉತ್ತರಾಖಂಡ ವಿರುದ್ಧ ಕರ್ನಾಟಕದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಗೆ ಗೆಳೆಯ ಪ್ರಸಿದ್ಧ ಕೃಷ್ಣರಿಂದ ಅದ್ಭುತ ಅವಕಾಶವೊಂದು ಕೈ ತಪ್ಪಿ ಹೋಗಿದೆ.
ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಮೊದಲ ಇನಿಂಗ್ಸ್ ನಲ್ಲಿ ಶತಕ ದಾಖಲಿಸಿದ್ದ ಕೆಎಲ್ ರಾಹುಲ್ ದ್ವಿತೀಯ ಇನಿಂಗ್ಸ್ ನಲ್ಲೂ ಶತಕದ ಅಂಚಿನಲ್ಲಿದ್ದರು. ನಿನ್ನೆಯ ದಿನದಂತ್ಯಕ್ಕೆ ಅವರು 70 ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಇಂದೂ ಅವರು ಶತಕ ಗಳಿಸಿಬಹುದು ಎಂದು ಎಲ್ಲರ ನಿರೀಕ್ಷೆಯಾಗಿತ್ತು.
ಆದರೆ ಪ್ರಸಿದ್ಧ ಕೃಷ್ಣ ರನೌಟ್ ಆಗುವುದರೊಂದಿಗೆ ಕೆಎಲ್ ರಾಹುಲ್ ಗೆ ದೊಡ್ಡ ಅವಕಾಶವೊಂದು ಕೈತಪ್ಪಿದೆ. 10 ಎಸೆಎತ ಎದುರಿಸಿದ್ದ ಪ್ರಸಿದ್ಧ ಕೃಷ್ಣ ರನ್ ಗಳಿಸದೇ ರನೌಟ್ ಆದರು. ಇದರೊಂದಿಗೆ ಕರ್ನಾಟಕದ ದ್ವಿತೀಯ ಇನಿಂಗ್ಸ್ ನಲ್ಲಿ 323 ರನ್ ಗಳಿಗೆ ಆಲೌಟ್ ಆಯಿತು. ಪ್ರಸಿದ್ಧ ಇನ್ನೊಂದು ತುದಿಯಲ್ಲಿದ್ದು ರಾಹುಲ್ ಗೆ ಸಹಾಯ ಮಾಡಿದ್ದರೆ ಇಂದು ಅವರು ದಾಖಲೆಯ ಶತಕ ಸಿಡಿಸುತ್ತಿದ್ದರು.
ಆದರೆ ಪ್ರಸಿದ್ಧ ಔಟಾಗಿದ್ದರಿಂದ ರಾಹುಲ್ 86 ರನ್ ಗಳಿಸಿ ಅಜೇಯವಾಗಿ ಪೆವಿಲಿಯನ್ ಗೆ ಸಾಗುವಂತಾಯಿತು. ಕ್ವಾರ್ಟರ್ ಫೈನಲ್ ನಲ್ಲೂ ಶತಕ ಸಿಡಿಸಿ ತಂಡಕ್ಕೆ ಆಧಾರವಾಗಿದ್ದ ರಾಹುಲ್ ಇದೀಗ ಸೆಮಿಫೈನಲ್ ನಲ್ಲೂ ತಂಡದ ಗೆಲುವಿಗೆ ಬುನಾದಿಯಾಗುವಂತಹ ಇನಿಂಗ್ಸ್ ಆಡಿದ್ದಾರೆ. ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 736 ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ 323 ರನ್ ಗಳಿಸಿತ್ತು. ಉತ್ತರಾಖಂಡ ಮೊದಲ ಇನಿಂಗ್ಸ್ ನಲ್ಲಿ 233 ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ ಇಂದು ಕೊನೆಯ ದಿನ ಊಟದ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 72 ರನ್ ಗಳಿಸಿದೆ.