ನವದೆಹಲಿ: ಡಿಕೆ ಶಿವಕುಮಾರ್ ಗೆ ಸಿಎಂ ಪಟ್ಟ ಕಟ್ಟಲು ಕಾಂಗ್ರೆಸ್ ಹೈಕಮಾಂಡ್ ಗೆ ಕಾಡುತ್ತಿರುವ ಭಯ ಯಾವುದು ಗೊತ್ತಾ? ಇದೇ ಕಾರಣಕ್ಕೆ ನಾಯಕತ್ವ ಬದಲಾವಣೆಗೆ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಬಣ ತಮ್ಮ ನಾಯಕನಿಗೆ ಸಿಎಂ ಹುದ್ದೆ ಸಿಗಬೇಕು ಎಂದು ಪ್ರಯತ್ನ ನಡೆಸಿದ್ದಾರೆ. ಆದರೆ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಸಿಎಂ ಪಟ್ಟ ಬಿಟ್ಟುಕೊಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಸಿಎಂ ಹುದ್ದೆ ತ್ಯಜಿಸಲು ಹೇಳಿದರೆ ಅವರು ಬಿಡಲೇಬೇಕಾಗುತ್ತದೆ. ಆದರೆ ಹೈಕಮಾಂಡ್ ಕೂಡಾ ತರಾತುರಿಗೆ ಬಿದ್ದು ಹಾಗೆ ಹೇಳುತ್ತಿಲ್ಲ. ಇದಕ್ಕೆ ಕಾರಣವೂ ಇದೆ.
ಸಿದ್ದರಾಮಯ್ಯ ಬಳಿ ಬಲವಂತವಾಗಿ ರಾಜೀನಾಮೆ ಕೊಡಿಸಿದರೆ ನಾಳೆ ಅವರು ಸರ್ಕಾರಕ್ಕೆ ಸಹಕಾರ ನೀಡದೇ ಇರಬಹುದು. ಅಥವಾ ಅವರ ಬೆಂಬಲಿಗರು ತಿರುಗಿ ಬೀಳಬಹುದು. ಆಗ ಸರ್ಕಾರ ಉಳಿಯುವುದು ಕಷ್ಟ. ಈ ಪರಿಸ್ಥಿತಿಯ ಲಾಭವನ್ನು ಬಿಜೆಪಿ-ಜೆಡಿಎಸ್ ಪಡೆದರೆ ರಾಜ್ಯ ಕೈತಪ್ಪಿ ಹೋಗಬಹುದು. ಸದ್ಯಕ್ಕೆ ಕಾಂಗ್ರೆಸ್ ಕೈಯಲ್ಲಿರುವ ಪ್ರಬಲ ರಾಜ್ಯವೆಂದರೆ ಕರ್ನಾಟಕ ಮಾತ್ರ. ಅಂತಹ ರಿಸ್ಕ್ ತೆಗೆದುಕೊಳ್ಳಲು ಹೈಕಮಾಂಡ್ ಸದ್ಯಕ್ಕೆ ರೆಡಿ ಇಲ್ಲ.
ಇನ್ನು ಡಿಕೆಶಿಗೂ ಸಿಎಂ ಸ್ಥಾನ ಇಲ್ಲ ಎಂದು ಖಡಾಖಂಡಿತವಾಗಿ ಹೇಳುವ ಸ್ಥಿತಿಯಲ್ಲಿ ಹೈಕಮಾಂಡ್ ಇಲ್ಲ. ಈ ಹಿಂದೆ ರಾಜಸ್ಥಾನದಲ್ಲಿ ಇದೇ ರೀತಿ ಮಾಡಿ ವಚನಭ್ರಷ್ಟ ಎಂಬ ಹಣೆಪಟ್ಟಿ ಕಾಂಗ್ರೆಸ್ ಹೈಕಮಾಂಡ್ ಹೆಗಲಿಗೇರಿತ್ತು. ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೆಚ್ಚು ಶ್ರಮಪಟ್ಟಿದ್ದಾರೆ ಎಂಬ ಭಾವನೆ ಜನರಲ್ಲಿದೆ. ಈ ಹಂತದಲ್ಲಿ ಡಿಕೆಶಿಗೆ ಅನ್ಯಾಯ ಮಾಡಿದರೆ ಜನರೇ ಮುಂದೆ ಕಾಂಗ್ರೆಸ್ ಕೈ ಹಿಡಿಯದೇ ಇರಬಹುದು. ಹೀಗಾಗಿ ಹೈಕಮಾಂಡ್ ಎಚ್ಚರಿಕೆಯ ನಡೆ ಇಡುತ್ತಿದೆ.