ದೆಹಲಿ: ನನ್ನ ಪ್ರಕಾರ ಹಾಗೂ ರಾಜ್ಯದ ಜನತೆಯ ಪ್ರಕಾರ ಎರಡೂವರೆ ವರ್ಷ ಪೂರೈಸಿದ್ದೇ ಒಂದು ಸಾಧನೆ ಎಂಬಂತಿದೆ. ಈ ಅವಧಿಯಲ್ಲಿ ಕಾಂಗ್ರೆಸ್ ಸರಕಾರದಿಂದ ರಾಜ್ಯದ ಜನತೆ, ಬಡವರು, ರೈತರಿಗೆ, ಯುವಜನರಿಗೆ ಯಾವುದೇ ರೀತಿ ನ್ಯಾಯ ಕೊಡುವುದರಲ್ಲಿ ಯಶಸ್ವಿ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಎರಡೂವರೆ ವರ್ಷಗಳನ್ನು ಪೂರೈಸಿದೆ. ನುಡಿದಂತೆ ನಡೆದ, ನುಡಿದಂತೆ ನಡೆಯುತ್ತಿರುವ ಸರಕಾರ, ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಎಲ್ಲವನ್ನೂ ಅನುಷ್ಠಾನ ಮಾಡಿದ್ದೇವೆ; ರಾಜ್ಯದ ಕಾಂಗ್ರೆಸ್ ಸರಕಾರ ಮಾದರಿ ಸರಕಾರ ಎಂದು ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಾದಿಯಾಗಿ ಸಚಿವ ಸಂಪುಟದ ಸದಸ್ಯರು ಪದೇಪದೇ ಈ ಮಾತನಾಡುತ್ತಾರೆ. ಆದರೆ, ಈ ಸರಕಾರ ಜನತೆಗೆ ನ್ಯಾಯ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಜನರು ಬಳಸುವ ವಸ್ತುಗಳ ಬೆಲೆ ಏರಿಕೆಯನ್ನು ಯಾವ ರೀತಿ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ ಎಂದು ಕೇಳಿದರು.
ರೈತರ ವಿಚಾರದಲ್ಲಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ರೈತರ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ತೋರಿದ ಮತ್ತೊಂದು ಸರಕಾರ ಯಾವುದೂ ಇಲ್ಲ ಎಂದು ಆರೋಪಿಸಿದರು.
ಕಬ್ಬು ಬೆಳೆಗಾರರ ಹೋರಾಟ ಗಮನಿಸಿದ್ದೀರಿ; ಹೋರಾಟ ಐದಾರು ದಿನವಾದರೂ ಬೆಳಗಾವಿ, ಬಾಗಲಕೋಟೆ, ಗದಗ ಮೊದಲಾದ ಜಿಲ್ಲೆಗಳಲ್ಲಿ ಹೋರಾಟ ನಡೆಸುತ್ತಿದ್ದರೆ, ಅಲ್ಲಿಯೇ ಇದ್ದ ಉಸ್ತುವಾರಿ ಸಚಿವರು ಸ್ಥಳಕ್ಕೆ ಹೋಗಿಲ್ಲ; ಸಕ್ಕರೆ ಸಚಿವರು ಎಲ್ಲಿದ್ದಾರೆಂದು ಜನರು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಆಕ್ಷೇಪಿಸಿದರು. ಸಚಿವರಿಗೆ ತಾಕೀತು ಮಾಡಬೇಕಾದ ಮುಖ್ಯಮಂತ್ರಿಗಳೂ ತಲೆ ಕೆಡಿಸಿಕೊಂಡಿಲ್ಲ ಎಂದು ದೂರಿದರು.