ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ನಡೆಯುತ್ತಿರುವ ಕುರ್ಚಿ ತಿಕ್ಕಾಟಕ್ಕೆ ಸ್ಪೋಟಕ ತಿರುವು ಸಿಗಲಿದೆ. ಇಂದು ರಾಜ್ಯ ರಾಜಕೀಯದ ಕುರ್ಚಿ ಕದನಕ್ಕೆ ಕ್ಲೈಮ್ಯಾಕ್ಸ್ ಸಿಗುವ ಸಾಧ್ಯತೆಯಿದೆ.
ಸಿಎಂ ಪಟ್ಟಕ್ಕಾಗಿ ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದು ಹೈಕಮಾಂಡ್ ಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಈ ನಡುವೆ ಇಂದು ರಾಜ್ಯದ ನಾಯಕರ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ತೆರಳಿರುವ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಈಗಾಗಲೇ ರಾಹುಲ್ ರಾಜ್ಯದ ಹಿರಿಯ ನಾಯಕ ಬಿಕೆ ಹರಿಪ್ರಸಾದ್, ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಕರೆಸಿಕೊಂಡು ಮಾಹಿತಿ ಪಡೆದುಕೊಂಡಿದ್ದಾರೆ. ಇದೀಗ ಖರ್ಗೆ-ರಾಹುಲ್ ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆಯಿದೆ. ಈ ವೇಳೆ ಸಿಎಂ ಪಟ್ಟದ ಬಗ್ಗೆ ರಾಹುಲ್ ಪ್ರಮುಖ ತೀರ್ಮಾನ ಕೈಗೊಳ್ಳಬಹುದು.
ಮೂಲಗಳ ಪ್ರಕಾರ ನವಂಬರ್ 29 ರಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ಸಂಧಾನ ಸಭೆ ನಡೆಯಲಿದೆ. ಇದಕ್ಕೆ ಸ್ವತಃ ರಾಹುಲ್ ಗಾಂಧಿ ನೇತೃತ್ವ ವಹಿಸಲಿದ್ದಾರೆ. ಈ ಕಾರಣಕ್ಕೆ ಇಬ್ಬರೂ ನಾಯಕರು ದೆಹಲಿಗೆ ತೆರಳುವ ಸಾಧ್ಯತೆಯಿದೆ. ಈ ಮೂಲಕ ಕುರ್ಚಿ ಕದನದ ಗೊಂದಲಗಳಿಗೆ ರಾಹುಲ್ ಗಾಂಧಿ ಸಮ್ಮುಖದಲ್ಲಿಯೇ ತೆರೆ ಎಳೆಯುವ ನಿರೀಕ್ಷೆಯಿದೆ.