Publish Date: Fri, 18 Oct 2024 (11:27 IST)
Updated Date: Fri, 18 Oct 2024 (11:29 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಮತ್ತೊಂದು ಪ್ರಕರಣ ಸುತ್ತಿಕೊಂಡಿದೆ. ಹಳೇ ಕೇಸ್ ಒಂದು ರಿ ಓಪನ್ ಆಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 120 ಕ್ಕೂ ಹೆಚ್ಚು ದಿನಗಳಿಂದ ದರ್ಶನ್ ಜೈಲಿನಲ್ಲೇ ಇದ್ದಾರೆ. ಅವರ ಜಾಮೀನು ಅರ್ಜಿ ಇತ್ತೀಚೆಗೆ ಕೆಳಹಂತದ ನ್ಯಾಯಾಲಯದಲ್ಲಿ ತಿರಸ್ಕೃತವಾಗಿತ್ತು. ಈ ಹಿನ್ನಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗುತ್ತಿದ್ದಾರೆ. ಆದರೆ ಈ ನಡುವೆ ಅವರಿಗೆ ಹಳೇ ಕೇಸ್ ಕಂಟಕ ತಂದಿದೆ.
ಭಗವಾನ್ ಶ್ರೀಕೃಷ್ಣಾ ಎಂಬ ಸಿನಿಮಾವನ್ನು ಯುವ ನಿರ್ಮಾಪಕ ಭರತ್ ಎಂಬವರು ನಿರ್ಮಿಸಿದ್ದರು. ಈ ಸಿನಿಮಾಗೆ ಧ್ರುವನ್ ನಾಯಕರಾಗಿದ್ದರು. ಈ ಸಿನಿಮಾ ಶೂಟಿಂಗ್ ನಡೆಯುತ್ತಿಲ್ಲ ಎಂದು ಧ್ರುವನ್ ನಟ ದರ್ಶನ್ ಬಳಿ ದೂರು ಹೇಳಿದ್ದರು. ಅದರಂತೆ ದರ್ಶನ್ ಕೈಯಲ್ಲಿ ಭರತ್ ಗೆ ಧ್ರುವನ್ ಕರೆ ಮಾಡಿಸಿದ್ದರು.
ಧ್ರುವನ್ ಪರವಾಗಿ ಮಾತನಾಡಿದ್ದ ದರ್ಶನ್ ಬೆದರಿಕೆ ಹಾಕಿದ್ದರು. ಘಟನೆ ಬಗ್ಗೆ ಭರತ್ ಇತ್ತೀಚೆಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಬಂಧಿತರಾದ ಬಳಿಕ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದರು. ಈ ಬಗ್ಗೆ ಅವರು ಪೊಲೀಸರಿಗೂ ದೂರು ನೀಡಿದ್ದರು.
ಈ ಹಿಂದೆ ಭರತ್ ದೂರು ಸಲ್ಲಿಸಿದಾಗ ಕೆಂಗೇರಿ ಠಾಣೆ ಪೊಲೀಸರು ಎನ್ ಸಿಆರ್ ದಾಖಲಿಸಿದ್ದರು ಅಷ್ಟೇ. ಇದೀಗ ದರ್ಶನ್, ಅವರ ಮ್ಯಾನೇಜರ್ ನಾಗರಾಜ್, ಧ್ರುವನ್ ವಿರುದ್ಧ ಹೊಸದಾಗಿ ಎನ್ ಸಿಆರ್ ದಾಖಲಿಸಿದ್ದು ತನಿಖೆಗೆ ಮುಂದಾಗಿದ್ದಾರೆ. ಹೀಗಾಗಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಗೆ ಮತ್ತೊಂದು ಕಂಟಕ ಎದುರಾಗಿದೆ.