Publish Date: Thu, 17 Oct 2024 (16:42 IST)
Updated Date: Thu, 17 Oct 2024 (16:46 IST)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಎ13 ಆರೋಪಿ ದೀಪಕ್ ಕುಮಾರ್ ಗುರುವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ದೀಪಕ್ ಕುಮಾರ್ಗೆ ಸೋಮವಾರ ಕೋರ್ಟ್ನಲ್ಲಿ ಜಾಮೀನು ಮಂಜೂರಾಗಿತ್ತು. ಕೋರ್ಟ್ ನೀಡಿರುವ ಷರತ್ತುಗಳನ್ನು ಪೂರೈಸಿ ಜೈಲಿಗೆ ಬೇಲ್ ಕಾಪಿ ತಲುಪಿತ್ತು. ಬುಧವಾರ ರಾತ್ರಿ ಬೇಲ್ ಕಾಪಿ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ಕೈಸೇರಿತ್ತು. ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ದೀಪಕ್ ಕುಮಾರ್ ಬಿಡುಗಡೆಯಾಗಿದ್ದಾನೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಮತ್ತು ಮೊದಲನೇ ಆರೋಪಿಯಾಗಿರುವ ದರ್ಶನ್ ಗೆಳತಿ ಪವಿತ್ರಾ ಗೌಡ, ದರ್ಶನ್ ಮ್ಯಾನೇಜರ್ ಆಗಿದ್ದ 11ನೇ ಆರೋಪಿ ಆರ್. ನಾಗರಾಜು ಹಾಗೂ 12ನೇ ಆರೋಪಿ ಎಂ. ಲಕ್ಷ್ಮಣ್ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
ಎಂಟನೇ ಆರೋಪಿ ರವಿಶಂಕರ್ ಅಲಿಯಾಸ್ ರವಿ, 13ನೇ ಆರೋಪಿ ದೀಪಕ್ ಕುಮಾರ್ ಅಲಿಯಾಸ್ ದೀಪಕ್ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ ಮತ್ತು ನಿಖಿಲ್ ನಾಯಕ್ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಇದರೊಂದಿಗೆ 17 ಆರೋಪಿಗಳ ಪೈಕಿ ಐವರಿಗೆ ಜಾಮೀನು ಮಂಜೂರಾಗಿದೆ.