Publish Date: Tue, 15 Oct 2024 (10:03 IST)
Updated Date: Tue, 15 Oct 2024 (10:06 IST)
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಜಾಮೀನು ನಿರಾಕರಣೆಯಾದ ಬೆನ್ನಲ್ಲೇ ಅವರ ಆರೋಗ್ಯ ಸ್ಥಿತಿ ಬಗ್ಗೆ ಲೇಟೆಸ್ಟ್ ಮಾಹಿತಿ ಹೊರಬಿದ್ದಿದೆ. ಅವರನ್ನು ವಿಮ್ಸ್ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿದ್ದಾರೆ.
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಗೆ ಬೆನ್ನು ನೋವು ತೀವ್ರವಾಗಿ ಕಾಡುತ್ತಿದೆ. ಕೂತರೆ ನಿಲ್ಲಲು ಆಗುತ್ತಿಲ್ಲ, ನಿಂತರೆ ಕೂರಲು ಕಷ್ಟ ಎನ್ನುವ ಪರಿಸ್ಥಿತಿಯಾಗಿದೆ. ಸ್ಕ್ಯಾನಿಂಗ್ ಮಾಡಿಸಿ ಶಸ್ತ್ರಚಿಕಿತ್ಸೆಗೊಳಗಾಗಲು ವೈದ್ಯರು ಸೂಚಿಸಿದ್ದರೂ ದರ್ಶನ್ ಬೆಂಗಳೂರಿನಲ್ಲಿಯೇ ಮಾಡಿಸುವುದಾಗಿ ಹಠ ಹಿಡಿದು ಕುಳಿತಿದ್ದಾರೆ.
ತಮ್ಮ ಆರೋಗ್ಯ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಜಾಮೀನು ಪಡೆಯಲು ಮುಂದಾಗಿದ್ದ ದರ್ಶನ್ ಗೆ ಕೋರ್ಟ್ ನಿನ್ನೆ ಜಾಮೀನು ನಿರಾಕರಿಸುವ ಮೂಲಕ ಶಾಕ್ ಕೊಟ್ಟಿತ್ತು. ಹೀಗಾಗಿ ದರ್ಶನ್ ಇದೇ ವಿಚಾರವನ್ನಿಟ್ಟುಕೊಂಡು ಬೆಂಗಳೂರಿನ ಜೈಲಿಗೆ ಶಿಫ್ಟ್ ಮಾಡಿಸಲು ಮನವಿ ಮಾಡಬಹುದು.
ಇದರ ನಡುವೆ ಅವರ ಬೆನ್ನು ನೋವು ತೀವ್ರವಾಗಿದ್ದು ಜೈಲಿಗೆ ಬಂದಿರುವ ವಿಮ್ಸ್ ಆಸ್ಪತ್ರೆಯ ನ್ಯೂರೋಲಜಿ ತಜ್ಞರು ದರ್ಶನ್ ಆರೋಗ್ಯ ತಪಾಸಣೆ ನಡೆಸಿ ವರದಿ ನೀಡಿದ್ದಾರೆ. ಇದು ನರಗಳ ಸಮಸ್ಯೆಯಿಂದಾಗುತ್ತಿರುವ ನೋವು ಎಂದಿದ್ದಾರೆ. ಸ್ವಲ್ಪ ಊತ ಕಂಡುಬಂದಿದೆ. ಇದಕ್ಕೆ ಸ್ಕ್ಯಾನಿಂಗ್ ಮಾಡಿಸಲು ಸಲಹೆ ನೀಡಿದ್ದಾರೆ. ಇದಲ್ಲದೆ, ಸದ್ಯದ ಮಟ್ಟಿಗೆ ಕೆಲವು ಮಾತ್ರೆ ಮತ್ತು ಮುಲಾಮು ಹಚ್ಚಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.