Publish Date: Sat, 04 Oct 2025 (08:33 IST)
Updated Date: Sat, 04 Oct 2025 (08:36 IST)
ಬೆಂಗಳೂರು: ನಗರದ ವಿವಿಧ ಮೆಟ್ರೊ ನಿಲ್ದಾಣಗಳಿಗೆ ಸಾಹಿತಿಗಳ ಹೆಸರನ್ನು ನಾಮಕರಣ ಮಾಡಿದ ಅವರಿಗೆ ಗೌರವ ನೀಡುವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಮೇರು ಸಾಹಿತಿಗಳ ಹಾಗೂ ಮೆಟ್ರೊ ನಿಲ್ದಾಣಗಳ ಹೆಸರನ್ನು ಒಳಗೊಂಡ ಪಟ್ಟಿ ಸಿದ್ಧಪಡಿಸಿ, ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ವ್ಯವಸ್ಥಾಪಕ ನಿರ್ದೇಶಕರಿಗೆ ಆಗಸ್ಟ್ ತಿಂಗಳಲ್ಲಿ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ಎಂ. ಶಾಂತಪ್ಪ ಅವರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ರಾಜಾಜಿನಗರ ಮೆಟ್ರೊ ನಿಲ್ದಾಣಕ್ಕೆ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಇಂದಿರಾನಗರ ಮೆಟ್ರೊ ನಿಲ್ದಾಣಕ್ಕೆ ಬಿ.ಎಂ.ಶ್ರೀ, ಎನ್.ಜಿ.ಇ.ಎಫ್ ಮೆಟ್ರೊ ನಿಲ್ದಾಣಕ್ಕೆ ಶ.ರಂ. ಕೃಷ್ಣೇಗೌಡ, ಮೈಸೂರು ರಸ್ತೆ ಮೆಟ್ರೊ ನಿಲ್ದಾಣಕ್ಕೆ ಎಚ್.ಎಲ್. ನಾಗೇಗೌಡ, ಬಸವನಗುಡಿ ಮೆಟ್ರೊ ನಿಲ್ದಾಣಕ್ಕೆ ಟಿ.ಆರ್. ಶಾಮಣ್ಣ, ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣಕ್ಕೆ ಎಚ್. ನರಸಿಂಹಯ್ಯ, ವಿಜಯನಗರ ಅಥವಾ ಅತ್ತಿಗುಪ್ಪೆ ಮೆಟ್ರೊ ನಿಲ್ದಾಣಕ್ಕೆ ರಾಜೇಗೌಡ ಹೊಸಹಳ್ಳಿ ಅವರ ಹೆಸರಿಡುವಂತೆ ಮನವಿ ಮಾಡಲಾಗಿದೆ.
ಕೆ.ಆರ್. ಮಾರುಕಟ್ಟೆ ಅಥವಾ ಚಾಮರಾಜಪೇಟೆ ಮೆಟ್ರೊ ನಿಲ್ದಾಣಕ್ಕೆ ಜಿ. ನಾರಾಯಣ, ಮಲ್ಲೇಶ್ವರ ಮೆಟ್ರೊ ನಿಲ್ದಾಣಕ್ಕೆ ಎಂ.ಪಿ.ಎಲ್. ಶಾಸ್ತ್ರಿ, ಮಹಾಲಕ್ಷ್ಮೀ ಲೇಔಟ್ ಮೆಟ್ರೊ ನಿಲ್ದಾಣಕ್ಕೆ ಕ.ರಾ.ಕೃ, ಶ್ರೀರಾಮಪುರ ಮೆಟ್ರೊ ನಿಲ್ದಾಣಕ್ಕೆ ಎಂ.ಎಚ್. ಕೃಷ್ಣಯ್ಯ, ಬನಶಂಕರಿ ಮೆಟ್ರೊ ನಿಲ್ದಾಣಕ್ಕೆ ಜಿ.ಎಸ್. ಶಿವರುದ್ರಪ್ಪ, ಜಯನಗರ ಮೆಟ್ರೊ ನಿಲ್ದಾಣಕ್ಕೆ ಪಿ. ಲಂಕೇಶ್, ಜೆ.ಪಿ.ನಗರ ಮೆಟ್ರೊ ನಿಲ್ದಾಣಕ್ಕೆ ಜಿ. ನಾರಾಯಣ ಕುಮಾರ್ ಹಾಗೂ ಆರ್.ವಿ. ಕಾಲೇಜು ಮೆಟ್ರೊ ನಿಲ್ದಾಣಕ್ಕೆ ಕಿ.ರಂ. ನಾಗರಾಜ ಹೆಸರನ್ನು ಸೂಚಿಸಲಾಗಿದೆ.