Publish Date: Sun, 07 Mar 2021 (09:05 IST)
Updated Date: Sun, 07 Mar 2021 (09:08 IST)
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬೆನ್ನಲ್ಲೇ ಆರು ಮಂದಿ ಸಚಿವರು ತಮ್ಮ ವಿರುದ್ಧ ಆಕ್ಷೇಪಾರ್ಹ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದರು. ಅವರಿಗೀಗ ಕೋರ್ಟ್ ಅಭಯ ಸಿಕ್ಕಿದೆ.
ಶಿವರಾಮ್ ಕೆ ಹೆಬ್ಬಾರ್, ಡಾ. ಸುಧಾಕರ್, ಬೈರತಿ ಬಸವರಾಜ್, ಬಿಸಿ ಪಾಟೀಲ್, ಎಸ್ ಟಿ ಸೋಮಶೇಖರ್ ಮತ್ತು ನಾರಾಯಣ ಗೌಡ ತಮ್ಮ ವಿರುದ್ಧ ಮಾಧ್ಯಮಗಳು ಆಕ್ಷೇಪಾರ್ಹ ಸುದ್ದಿ ಪ್ರಸಾರ ಮಾಡಬಾರದು ಎಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ 26 ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯ ಮಾನ ರಕ್ಷಣೆಯ ಭರವಸೆ ನೀಡಿದೆ.
ಈ ಎಲ್ಲಾ ಸಚಿವರ ವಿರುದ್ಧ ದೃಢಪಡಿಸದ, ಮಾನಿಹಾರಕ ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಮಾನ ಹಾನಿ ವರದಿಗಳಿಂದ ನಮ್ಮ ವೈಯಕ್ತಿಕ ಮತ್ತು ರಾಜಕೀಯ ವೃತ್ತಿ ಜೀವನಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಸಚಿವ ಬೈರತಿ ಬಸವರಾಜು ಹೇಳಿದ್ದಾರೆ. ಇದೀಗ ಕೋರ್ಟ್ ಅರ್ಜಿಯಲ್ಲಿ ಸಚಿವರು ಹೇಳಿದ ಮಾಧ್ಯಮಗಳಿಗೆ ನೋಟಿಸ್ ನೀಡಿದ್ದು, ಅವರ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಆದೇಶ ನೀಡಿದೆ.