Publish Date: Thu, 27 Nov 2025 (10:07 IST)
Updated Date: Thu, 27 Nov 2025 (10:11 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಈಗ ಅಧಿಕಾರ ಹಂಚಿಕೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಇಂದು ಮಾಡಿರುವ ಟ್ವೀಟ್ ಒಂದು ಸಂಚಲನ ಸೃಷ್ಟಿಸುತ್ತಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಕುರ್ಚಿ ಫೈಟ್ ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಇದೀಗ ರಾಜ್ಯದ ಅಧಿಕಾರ ಹಂಚಿಕೆ ಕಲಹ ದೆಹಲಿಯಲ್ಲಿ ಹೈಕಮಾಂಡ್ ಅಂಗಳಕ್ಕೆ ಬಂದು ತಲುಪಿದೆ. ಹೈಕಮಾಂಡ್ ನಾಯಕರೇ ಈಗ ಸಮಸ್ಯೆ ಬಗೆಹರಿಸಲಿದ್ದಾರೆ.
ಇದರ ನಡುವೆ ಡಿಕೆ ಶಿವಕುಮಾರ್ ಈ ಹಿಂದೆ ತಮ್ಮ ಮತ್ತು ಹೈಕಮಾಂಡ್ ನಡುವೆ ನಡೆದ ಮಾತುಕತೆಗಳನ್ನೆಲ್ಲಾ ಮಾಧ್ಯಮಗಳ ಮುಂದೆ ಹೇಳಲ್ಲ ಎಂದಿದ್ದರು. ಇದೆಲ್ಲಾ ಗುಟ್ಟಿನ ವ್ಯಾಪಾರ ಎಂದಿದ್ದರು. ಆದರೆ ಅದರ ನಡುವೆ ಇಂದು ಡಿಕೆಶಿ ಕೊಟ್ಟ ಮಾತು ಉಳಿಸಿಕೊಳ್ಳುವುದರ ಬಗ್ಗೆ ಟ್ವೀಟ್ ಮಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಒಬ್ಬ ನ್ಯಾಯಾಧೀಶ, ಅಧ್ಯಕ್ಷ ನನ್ನನ್ನೂ ಸೇರಿಸಿ ಯಾರೇ ಆಗಿರಲಿ, ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್ ನಾನಾ ಅರ್ಥಗಳಿಗೆ ಕಾರಣವಾಗಿದೆ. ಇದು ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಟಾಂಗ್ ಕೊಟ್ಟಿದ್ದಾ? ಅಥವಾ ಹೈಕಮಾಂಡ್ ಗೆ ನೀಡಿದ ಎಚ್ಚರಿಕೆಯಿರಬಹುದೇ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಅಧಿಕಾರ ಹಂಚಿಕೆ ಫೈಟ್ ನಡುವೆಯೇ ಡಿಕೆಶಿಯ ಈ ಒಂದು ಟ್ವೀಟ್ ಈಗ ಸಂಚಲನ ಸೃಷ್ಟಿಸುತ್ತಿದೆ.