Publish Date: Tue, 25 Nov 2025 (09:23 IST)
Updated Date: Tue, 25 Nov 2025 (09:25 IST)
ಬೆಂಗಳೂರು: ರಾಜ್ಯದಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಸಿಎಂ ಕುರ್ಚಿಗಾಗಿ ಒಳಗೊಳಗೇ ತಿಕ್ಕಾಟವಾಗುತ್ತಿದೆ. ಇದರ ನಡುವೆ ಯಡಿಯೂರಪ್ಪನವರು ಸದನದಲ್ಲಿ ಅಂದೇ ನುಡಿದಿದ್ದ ಡಿಕೆಶಿ ಭವಿಷ್ಯ ಈಗ ವೈರಲ್ ಆಗ್ತಿದೆ.
ಈ ಹಿಂದೆ ಆರು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಬಳಿಕ ಸಂಖ್ಯಾಬಲ ಸಾಬೀತುಪಡಿಸಲು ವಿಫಲರಾಗಿ ಅಧಿಕಾರ ಕಳೆದುಕೊಂಡಾಗ ಸದನದಲ್ಲಿ ಭಾಷಣ ಮಾಡಿದ್ದರು. ಆಗ ನಗುತ್ತಾ ಕೂತಿದ್ದ ಡಿಕೆ ಶಿವಕುಮಾರ್ ಬಳಿ ನೀವು ಅಲ್ಲಿದ್ದರೆ ಸಿಎಂ ಆಗುತ್ತೀರಾ ಎಂದು ಪ್ರಶ್ನಿಸಿದ್ದರು. ಆಗ ಡಿಕೆಶಿ ನಗುತ್ತಿದ್ದರು, ಯಡಿಯೂರಪ್ಪ ಗಂಭೀರವಾಗಿದ್ದರು.
ಈಗ ಡಿಕೆ ಶಿವಕುಮಾರ್ ಸಿಎಂ ಹುದ್ದೆಗಾಗಿ ಕಾಂಗ್ರೆಸ್ ನಲ್ಲಿ ಹೆಣಗಾಡುವುದನ್ನು ನೋಡಿದರೆ ನೆಟ್ಟಿಗರು ಯಡಿಯೂರಪ್ಪನವರ ಅದೇ ಮಾತನ್ನು ವೈರಲ್ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿದ್ದಷ್ಟು ದಿನವೂ ಡಿಕೆಶಿಗೆ ಸಿಎಂ ಆಗುವುದು ಸುಲಭದ ಮಾತಲ್ಲ ಎನ್ನುತ್ತಿದ್ದಾರೆ.
ಒಂದು ವೇಳೆ ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರೆ ಅಥವಾ ಹೊಂದಾಣಿಕೆ ಮಾಡಿಕೊಂಡಿದ್ದರೆ ಡಿಕೆಶಿ ಎಂದೋ ಸಿಎಂ ಆಗುತ್ತಿದ್ದರು. ಆದರೆ ಡಿಕೆ ಶಿವಕುಮಾರ್ ಎಂದಿಗೂ ಪಕ್ಷಕ್ಕೆ ನಿಷ್ಠರಾಗಿಯೇ ಇದ್ದವರು. ಹೀಗಾಗಿ ಅವರ ಕನಸು ಇನ್ನೂ ಈಡೇರಿಲ್ಲ.