Publish Date: Tue, 25 Nov 2025 (11:48 IST)
Updated Date: Tue, 25 Nov 2025 (11:50 IST)
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕುರ್ಚಿ ಕದನವಾಗುತ್ತಿರುವಾಗಲೇ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಗೇ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು ಭಾರೀ ಕುತೂಹಲ ಮೂಡಿಸಿದೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮೂರು ದಿನ ಇದ್ದು ಸತತವಾಗಿ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಮೀಟಿಂಗ್ ನಡೆಸಿದ್ದರು. ನಾಯಕತ್ವ ಬದಲಾವಣೆ ಬಗ್ಗೆ ಶಾಸಕರ ಅಭಿಪ್ರಾಯಗಳನ್ನೂ ಸಂಗ್ರಹಿಸಿದ್ದಾರೆ.
ಈ ನಡುವೆ ಇಂದು ದೆಹಲಿಯಲ್ಲಿ ರಾಹುಲ್ ಗಾಂಧಿಯನ್ನು ಖರ್ಗೆ ಭೇಟಿ ಮಾಡುವ ಸಾಧ್ಯತೆಯಿದೆ. ಇದಕ್ಕಾಗಿ ದೆಹಲಿಗೆ ತೆರಳಿರುವ ಖರ್ಗೆ ಜೊತೆ ಒಂದೇ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಡಿಕೆಶಿ ಕೂಡಾ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಜೊತೆಗೇ ಹೋಗಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುತ್ತಾರಾ ಅಥವಾ ಜೊತೆಗೇ ತೆರಳುವಾಗ ತಮ್ಮ ಅಭಿಪ್ರಾಯಗಳನ್ನು ಖರ್ಗೆಗೆ ತಿಳಿಸುವ ಉದ್ದೇಶ ಡಿಕೆಶಿಯದ್ದಾ ಎನ್ನುವ ಕುತೂಹಲವಿದೆ. ಒಟ್ಟಿನಲ್ಲಿ ಇಂದು-ನಾಳೆಯಾಗಿ ರಾಜ್ಯದ ಕುಸ್ತಿ ಕದನ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುವ ಸಾಧ್ಯತೆಯಿದೆ.