Publish Date: Wed, 11 Dec 2024 (16:00 IST)
Updated Date: Wed, 11 Dec 2024 (16:03 IST)
ಮದ್ದೂರು: ಅಗಲಿದ ರಾಜಕೀಯ ಗುರು, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣಗೆ ಅಂತಿಮ ಸಂಸ್ಕಾರದ ವೇಳೆ ಹೂಗುಚ್ಛವನ್ನಿಡುವಾಗ ಡಿಕೆ ಶಿವಕುಮಾರ್ ಕಣ್ಣೀರು ಹಾಕಿದರು.
ಮದ್ದೂರಿನ ಸೋಮನಹಳ್ಳಿಯಲ್ಲಿ ಎಸ್ಎಂ ಕೃಷ್ಣಗೆ ಸಕಲ ಸರ್ಕಾರೀ ಗೌರವಗಳೊಂದಿಗೆ ಅಂತಿಮ ವಿದಾಯ ಹೇಳಲಾಯಿತು. ಸರ್ಕಾರೀ ಗೌರವ ಸಮರ್ಪಣೆ ವೇಳೆ ಸಿಎಂ ಸಿದ್ದರಾಮಯ್ಯ ಆದಿಯಾಗಿ ಎಲ್ಲಾ ಗಣ್ಯರೂ ಹೂಗುಚ್ಛವನ್ನಿಟ್ಟು ಕೊನೆಯ ಬಾರಿಗೆ ಗೌರವ ಸಮರ್ಪಿಸಿದರು.
ಅದರಂತೆ ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ತಮ್ಮ ಸರದಿ ಬಂದಾಗ ಹೂಗುಚ್ಛವನ್ನಿಟ್ಟರು. ಈ ವೇಳೆ ಗುರುವಿಗೆ ಕೊನೆಯ ಬಾರಿಗೆ ದೀರ್ಘ ನಮಸ್ಕಾರ ಮಾಡಿದ ಡಿಕೆ ಶಿವಕುಮಾರ್ ಭಾವುಕರಾದರು. ಕಣ್ಣೀರು ಒರೆಸುತ್ತಲೇ ಮರಳಿ ತಮ್ಮ ಸ್ಥಾನಕ್ಕೆ ಬಂದರು. ತಮ್ಮ ತಂದೆ ಸಮಾನರಾದ ಎಸ್ಎಂ ಕೃಷ್ಣ ಸಾವು ಡಿಕೆಶಿಗೆ ತೀರಾ ಆಘಾತ ತಂದಿದೆ.
ನಿನ್ನೆಯಿಂದ ಎಸ್ಎಂ ಕೃಷ್ಣ ಅಂತಿಮ ಯಾತ್ರೆ, ಅಂತಿಮ ಸಂಸ್ಕಾರದ ಎಲ್ಲಾ ಹೊಣೆ ಹೊತ್ತ ಡಿಕೆ ಶಿವಕುಮಾರ್ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಜೊತೆಗೆ ಎಸ್ಎಂ ಕೃಷ್ಣ ಮೊಮ್ಮಗ ಡಿಕೆ ಶಿವಕುಮಾರ್ ಅಳಿಯನೂ ಹೌದು. ಹೀಗಾಗಿ ತಮ್ಮ ಆಪ್ತ ಹಿರಿಯ ನಾಯಕನನ್ನು ಕಳೆದುಕೊಂಡ ದುಃಖ ಅವರಲ್ಲಿತ್ತು.