Publish Date: Wed, 07 Nov 2018 (09:40 IST)
Updated Date: Wed, 07 Nov 2018 (09:42 IST)
ಬಳ್ಳಾರಿ: ಲೋಕಸಭೆ ಉಪಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಸ್ನೇಹಿತ ಬಿ ಶ್ರೀರಾಮುಲು ಅಷ್ಟೆಲ್ಲಾ ಪ್ರಚಾರ ನಡೆಸಿಯೂ ತವರಿನಲ್ಲಿ ತಮ್ಮ ಪರ ಅಭ್ಯರ್ಥಿ ಸೋಲುಂಡ ಹತಾಶೆಯಲ್ಲಿರುವಾಗಲೇ ಗಣಿ ದಣಿ ಜನಾರ್ಧನ ರೆಡ್ಡಿಗೆ ಹೊಸ ಸಂಕಟ ಎದುರಾಗಿದೆ.
ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಲ್ಲದೆ, ಕಳೆದ ವಿಧಾನಸಭೆ ಚುನಾವಣೆಗೆ ಸುಮಾರು 20 ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದಾರೆಂಬ ಗಂಭೀರ ಆರೋಪಗಳ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿ ಬಂಧನಕ್ಕೆ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದೀಗ ಜನಾರ್ಧನ ರೆಡ್ಡಿ ತಲೆಮರೆಸಿಕೊಂಡು ಅಲೋಕ್ ಕುಮಾರ್ ನೇತೃತ್ವದ ಸಿಸಿಬಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಇಡಿ ಪ್ರಕರಣದಿಂದ ಹೊರ ಬರಲು ಇಡಿ ಇಲಾಖೆಯ ಅಧಿಕಾರಿಗಳಿಗೆ ಲಂಚ ಕೊಡಲು ಮುಂದಾಗಿದ್ದಾರೆಂಬ ಗಂಭೀರ ಪ್ರಕರಣವೂ ಅವರ ವಿರುದ್ಧ ದಾಖಲಾಗಿದೆ.
ಚುನಾವಣೆಯ ಸಂದರ್ಭದಲ್ಲಿಯೇ ಜನಾರ್ಧನ ರೆಡ್ಡಿ ವಿರುದ್ಧ ಸಾಕ್ಷ್ಯ ಸಂಗ್ರಹಿಸಲಾಗಿತ್ತಾದರೂ, ಆ ಸಂದರ್ಭದಲ್ಲಿ ಬಂಧಿಸಿದರೆ ಇದಕ್ಕೆ ರಾಜಕೀಯ ಬಣ್ಣ ಬರಬಹುದು ಎಂಬ ಉದ್ದೇಶಕ್ಕೆ ಚುನಾವಣೆ ಫಲಿತಾಂಶದ ನಂತರ ಸಿಸಿಬಿ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ಜನಾರ್ಧನ ರೆಡ್ಡಿ ಜತೆಗೆ ಅವರ ಆಪ್ತ ಅಲಿಖಾನ್ ಬಂಧನಕ್ಕೂ ಪೊಲೀಸರು ಹೊಂಚು ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.