ಬೆಂಗಳೂರು: ಸಾಹಸಸಿಂಹ ಡಾ ವಿಷ್ಣುವರ್ಧನ್ ಜನ್ಮಜಯಂತಿ ಇಂದು. ಆದರೆ ಬದುಕಿದ್ದಾಗ ಸಾಕಷ್ಟು ನೋವು ಅನುಭವಿಸಿದ್ದ ವಿಷ್ಣುದಾದಗೆ ಸತ್ತು ಸ್ವರ್ಗ ಸೇರಿದ ಮೇಲೂ ನೋವು ತಪ್ಪಿಲ್ಲ ಎಂಬುದಕ್ಕೆ ಇಂದಿನ ಘಟನೆಯೇ ಸಾಕ್ಷಿಯಾಯಿತು.
ಇಂದು ವಿಷ್ಣುವರ್ಧನ್ ಜನ್ಮ ಜಯಂತಿ ನಿಮಿತ್ತ ಅವರನ್ನು ಮಣ್ಣು ಮಾಡಿದ್ದ ಅಭಿಮಾನ್ ಸ್ಟುಡಿಯೋದಲ್ಲಿ ಪೂಜೆ ಸಲ್ಲಿಸಲು ಅಭಿಮಾನಿಗಳ ದಂಡೇ ಹರಿದುಬಂದಿತ್ತು. ಆದರೆ ಈ ಜಾಗದ ಮಾಲಿಕರಾದ ಹಿರಿಯ ನಟ, ದಿವಂಗತ ಬಾಲಣ್ಣನವರ ಮಕ್ಕಳು ಅಭಿಮಾನಿಗಳ ಪೂಜೆಗೆ ಅವಕಾಶ ಕೊಟ್ಟಿಲ್ಲ.
ಈ ಭೂಮಿ ವಿವಾದದಿಂದ ಬೇಸತ್ತು ಈಗಾಗಲೇ ವಿಷ್ಣುವರ್ಧನ್ ಕುಟುಂಬ ಅವರ ಚಿತಾಭಸ್ಮವನ್ನು ಮೈಸೂರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಬೃಹತ್ ಸ್ಮಾರಕವನ್ನೇ ನಿರ್ಮಾಣ ಮಾಡಿಕೊಂಡಿದ್ದಾರೆ. ವಿಷ್ಣುವರ್ಧನ್ ಕುಟುಂಬಸ್ಥರು ಏನೇ ಪೂಜೆ ಮಾಡುವುದಿದ್ದರೂ ಈಗ ಇಲ್ಲಿಯೇ ಮಾಡಿಕೊಳ್ಳುತ್ತಾರೆ.
ಆದರೆ ಅವರ ಅಭಿಮಾನಿಗಳು ಈಗಲೂ ಬಾಲಣ್ಣ ಮಕ್ಕಳ ಒಡೆತನದಲ್ಲಿರುವ ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋ ಜಾಗದಲ್ಲೇ ಪೂಜೆ ಮಾಡುತ್ತಿದ್ದಾರೆ. ಅದರೆ ಇದಕ್ಕೆ ಬಾಲಣ್ಣ ಮಕ್ಕಳು ತಡೆಯಾಗಿದ್ದಾರೆ. ಇಂದೂ ಕೂಡಾ ಅಭಿಮಾನಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೊಟ್ಟಿಲ್ಲ. ಇದರಿಂದ ಬೇಸರಗೊಂಡ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ ಮತ್ತು ಪ್ರತಿಭಟನೆಯನ್ನೂ ನಡೆಸಿದರು. ಬದುಕಿದ್ದಾಗ ವಿಷ್ಣುವರ್ಧನ್ ಗೆ ಸಾಕಷ್ಟು ಅವಮಾನ, ನೋವು ಕೊಟ್ಟರು. ಈಗ ಸತ್ತ ಮೇಲೂ ಅವರಿಗೆ ನೆಮ್ಮದಿಯಿಲ್ಲ ಎಂದು ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.