Publish Date: Wed, 08 Mar 2023 (17:04 IST)
Updated Date: Wed, 08 Mar 2023 (17:05 IST)
ಬೆಂಗಳೂರು: ಕಾಂತಾರ 2 ಸ್ಕ್ರಿಪ್ಟ್ ಕೆಲಸಗಳಿಗಾಗಿ ಕಾಡಿನಲ್ಲಿ ಓಡಾಡಿ ಮಾಹಿತಿ ಕಲೆ ಹಾಕಿದ್ದ ರಿಷಬ್ ಶೆಟ್ಟಿ ಈಗ ಕಾಡಿನ ಜನರ ಕಷ್ಟ ಪರಿಹರಿಸಲು ಮುಂದಾಗಿದ್ದಾರೆ.
ರಿಷಬ್ ಕಾಂತಾರ 2 ಸ್ಕ್ರಿಪ್ಟ್ ಬರೆಯಲೆಂದು ಕಾಡಂಚಿನ ಜನರ ಸಮಸ್ಯೆ, ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ರಿಷಬ್ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕಾಡಿನ ಕೃಷಿಕರು ಆನೆ ದಾಳಿಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ, ಅರಣ್ಯ ಇಲಾಖೆ ಗಾರ್ಡ್ ಗಳು ಕಾಡ್ಗಿಚ್ಚಿನ ಸಮಸ್ಯೆ ಬಗ್ಗೆ ಹೇಳಿಕೊಂಡರು. ಈ ಎಲ್ಲಾ ವಿಷಯಗಳ ಬಗ್ಗೆ ಅರಣ್ಯ ಇಲಾಖೆಯ ಜೊತೆ ಚರ್ಚೆ ನಡೆಸಿದ್ದಾರಂತೆ.
ಅದೆಲ್ಲಾ ಗಮನದಲ್ಲಿಟ್ಟುಕೊಂಡು ಸುಮಾರು 20 ಅಂಶಗಳ ಪಟ್ಟಿ ತಯಾರಿಸಿ ರಿಷಬ್ ಶೆಟ್ಟಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಕೂಡಾ ಸ್ಪಂದಿಸಿದ್ದಾರೆ ಎಂದು ಸ್ವತಃ ರಿಷಬ್ ಹೇಳಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ಪಡೆದಿದ್ದಕ್ಕೆ ನಾವು ಧನ್ಯ ಎಂದು ಹೇಳಬೇಕು. ಈ ರೀತಿಯ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಗಮನಿಸಿ ಅದಕ್ಕೆ ಪರಿಹಾರ ನೀಡುವ ಕೆಲಸ ಅವರು ಮಾಡುತ್ತಾರೆ ಎಂದು ರಿಷಬ್ ಹೊಗಳಿದ್ದಾರೆ.