Publish Date: Fri, 20 Mar 2026 (09:33 IST)
Updated Date: Fri, 20 Mar 2026 (09:36 IST)
ಬೆಂಗಳೂರು: ಯುಗಾದಿ ಹಬ್ಬದ ದಿನ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಅಧ್ಯಾಯ 2 ಇಲ್ಲಿಂದ ಶುರು ಎಂದು ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ಅಭಿಮಾನಿಗಳಿಗೆ ಎರಡು ಅನುಮಾನ ಶುರುವಾಗಿದೆ.
ನಿನ್ನೆ ಇದ್ದಕ್ಕಿದ್ದಂತೆ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಅಧ್ಯಾಯ 2 ಇಲ್ಲಿಂದ ಶುರು ಎಂದು ಬರೆದುಕೊಂಡಿದ್ದರು. ಆದರೆ ಇದರ ಹೊರತಾಗಿ ಬೇರೇನೂ ಸುಳಿವು ಕೊಟ್ಟಿಲ್ಲ. ವಿಶೇಷವೆಂದರೆ ಹೀಗೆ ಬರೆದ ಪೋಸ್ಟರ್ ನಲ್ಲಿ ಹೊಂಬಾಳೆ ಫಿಲಂಸ್ ಬದಲು ರಿಷಬ್ ಶೆಟ್ಟಿ ಫಿಲಂಸ್ ಲೋಗೋ ಇದೆ.
ಇದನ್ನು ನೋಡಿ ಅಭಿಮಾನಿಗಳಿಗೆ ಎರಡು ಅನುಮಾನ ಶುರುವಾಗಿದೆ. ಅಧ್ಯಾಯ 2 ಎಂದು ರಿಷಬ್ ಸುಳಿವು ನೀಡಿರುವುದು ಕಾಂತಾರ ಅಧ್ಯಾಯ 2 ಬಗ್ಗೆ ಇರಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದಾರೆ. ಯಾಕೆಂದರೆ ಕಾಂತಾರ ಅಧ್ಯಾಯ 1 ಈಗಾಗಲೇ ಮುಗಿದಿದೆ. ಅಧ್ಯಾಯ 2 ಮಾಡುವುದಾಗಿ ರಿಷಬ್ ಈ ಹಿಂದೊಮ್ಮೆ ಹೇಳಿದ್ದರು. ಆದರೆ ಸದ್ಯಕ್ಕೆ ಅವರು ಹನುಮಾನ್ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.
ಒಂದು ವೇಳೆ ಅವರು ಕಾಂತಾರ ಚಾಪ್ಟರ್ 2 ಬಗ್ಗೆಯೇ ಹೇಳಿದ್ದಾರೆ ಎಂದಾದರೆ ಲೋಗೋದಲ್ಲಿ ಹೊಂಬಾಳೆ ಫಿಲಂಸ್ ಹೆಸರಿರಬೇಕಿತ್ತು. ಆದರೆ ಅದರ ಬದಲು ರಿಷಬ್ ಶೆಟ್ಟಿ ಫಿಲಂಸ್ ಹೆಸರಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಹೀಗಾಗಿ ಕಾಂತಾರ ಚಾಪ್ಟರ್ 2 ಸಿನಿಮಾವನ್ನು ಹೊಂಬಾಳೆ ಬಿಟ್ಟು ತಮ್ಮದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸುತ್ತಾರಾ ಅಥವಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಇಲ್ಲವೇ ಬೆಲ್ ಬಾಟಂ 2 ಸಿನಿಮಾ ಬಗ್ಗೆ ಸುಳಿವು ನೀಡಿದ್ದಾರಾ ಎಂಬ ಅನುಮಾನ ಅಭಿಮಾನಿಗಳಿಗೆ ಮೂಡಿದೆ.