Publish Date: Tue, 18 Jun 2024 (14:15 IST)
Updated Date: Tue, 18 Jun 2024 (14:17 IST)
ಬೆಂಗಳೂರು: ರೇಣುಕಾಸ್ವಾಮಿ ಮೇಲೆ ಹಲ್ಲೆ, ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮೇಲಿದ್ದ ಅಭಿಮಾನ ಕೆಲವು ಅಭಿಮಾನಿಗಳಿಗೆ ಕಡಿಮೆಯಾಗುತ್ತಿದೆ.
ದರ್ಶನ್ ಮತ್ತು ಗ್ಯಾಂಗ್ ನಡೆಸಿದ ಹತ್ಯೆಯ ಭೀಕರತೆ ಈಗ ಎಳೆ ಎಳೆಯಾಗಿ ಬಿಚ್ಚಿಡಲಾಗುತ್ತಿದೆ. ದರ್ಶನ್ ಮತ್ತು ಗ್ಯಾಂಗ್ ರೇಣುಕಾಸ್ವಾಮಿ ಮೇಲೆ ನಡೆಸಿದ ಚಿತ್ರಹಿಂಸೆ ಬಗ್ಗೆ ಕೇಳಿ ಹಲವರ ಹೃದಯವೇ ಚೂರಾಗಿದೆ. ತೆರೆಯ ಮೇಲೆ ಮತ್ತು ಹೊರಗೆ ಇಷ್ಟು ದಿನ ಆದರ್ಶವೆಂದುಕೊಂಡಿದ್ದ ನಟನ ಮತ್ತೊಂದು ಮುಖ ನೋಡಿ ಕೆಲವರು ಬೇಸರಪಟ್ಟುಕೊಳ್ಳುತ್ತಿದ್ದಾರೆ.
ದರ್ಶನ್ ಇತರರಿಗೆ ಮಾಡುತ್ತಿದ್ದ ಸಹಾಯ, ಅಭಿಮಾನಿಗಳಿಗೆ ಅವರು ತೋರುತ್ತಿದ್ದ ಪ್ರೀತಿ ನೋಡಿ ಎಷ್ಟೋ ಜನ ಅವರ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟಿದ್ದರು. ಎಷ್ಟೋ ಮಂದಿ ತಮ್ಮ ವಾಹನಗಳ ಮೇಲೆ ದರ್ಶನ್ ಹೆಸರನ್ನು ಡಿ ಬಾಸ್ ಎಂದು ಬರೆಯಿಸಿಕೊಂಡಿದ್ದರು.
ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ತಮ್ಮ ಬೈಕ್ ಮೇಲೆ, ವಾಹನಗಳ ಮೇಲೆ ಬರೆಸಲಾಗಿದ್ದ ಡಿ ಬಾಸ್ ಎನ್ನುವ ಬರಹವನ್ನು ಅಳಿಸಿ ಹಾಕುತ್ತಿದ್ದಾರೆ. ಮತ್ತೆ ಕೆಲವರು ದರ್ಶನ್ ಆದರ್ಶ ಎಂದು ನಮ್ಮ ಮಗುವಿಗೆ ಹೆಸರಿಟ್ಟೆವು. ಈಗ ನೋಡಿದರೆ ಹೀಗಾಯ್ತು ಎನ್ನುತ್ತಿದ್ದಾರೆ. ಒಟ್ಟಾರೆ ಈ ಪ್ರಕರಣದಿಂದ ದರ್ಶನ್ ಜೀವಮಾನದಲ್ಲಿ ಗಳಿಸಿದ್ದ ಹೆಸರು, ಖ್ಯಾತಿ, ಗೌರವವನ್ನು ಒಂದೇ ಕ್ಷಣಕ್ಕೆ ಮಣ್ಣುಪಾಲು ಮಾಡಿಕೊಂಡಿದ್ದಾರೆ.