Publish Date: Sun, 13 Apr 2025 (08:55 IST)
Updated Date: Sun, 13 Apr 2025 (08:58 IST)
ಜೈಪುರ: ಐಪಿಎಲ್ 2025 ರಲ್ಲಿಇಂದು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯವಾಡಲಿದೆ. ಇಂದಿನ ಪಂದ್ಯದಲ್ಲಿ ಆರ್ ಸಿಬಿಗೆ ಗೆಲುವು ಎಷ್ಟು ಮುಖ್ಯ ಗೊತ್ತಾ?
ಯಾಕೋ ಈ ಬಾರಿ ತವರಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ಆರ್ ಸಿಬಿ ಉಳಿದ ಮೂರು ಪಂದ್ಯಗಳನ್ನೂ ಗೆದ್ದುಕೊಂಡಿದೆ. ತವರಿನಲ್ಲಿ ಸಿಕ್ಕ ಎರಡು ಸೋಲುಗಳು ಆರ್ ಸಿಬಿ ಮುಂದಿನ ಹಾದಿಯನ್ನು ಕಠಿಣವಾಗಿಸಿದೆ. ಇದೀಗ ಪ್ಲೇ ಆಫ್ ಹಂತಕ್ಕೇರಲು ಆರ್ ಸಿಬಿ ಮುಂದಿನ ಕೆಲವು ಪಂದ್ಯಗಳನ್ನು ಗೆಲ್ಲುತ್ತಾ ಸಾಗಬೇಕು.
ಇಂದು ಜೈಪುರದಲ್ಲಿ ಪಂದ್ಯ ನಡೆಯುತ್ತಿರುವುದು ಸಮಾಧಾನಕರ ಅಂಶ. ಅತ್ತ ರಾಜಸ್ಥಾನಕ್ಕೂ ಗೆಲ್ಲಲೇಬೇಕಾದ ಒತ್ತಡವಿದೆ. ಕಳೆದ ಐಪಿಎಲ್ ನಲ್ಲಿ ಸತತ ಗೆಲುವು ಕಂಡಿದ್ದ ರಾಜಸ್ಥಾನ್ ಗೆ ಈ ಐಪಿಎಲ್ ನಲ್ಲಿ ಯಾಕೋ ಸತತ ಸೋಲುಗಳು ಹಿನ್ನಡೆಯುಂಟು ಮಾಡಿದೆ. ಹೀಗಾಗಿ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಇಂದಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಆರ್ ಸಿಬಿಯ ಇತ್ತೀಚೆಗಿನ ಬ್ಯಾಟಿಂಗ್ ಪ್ರದರ್ಶನ ನೋಡಿದರೆ ದೇವದತ್ತ್ ಪಡಿಕ್ಕಲ್ ಪ್ರದರ್ಶನ ನಿರಾಶಾದಾಯಕವಾಗಿದೆ. ಹೀಗಾಗಿ ಅವರನ್ನು ತಂಡದಿಂದ ಕಿತ್ತು ಹಾಕಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಬಹುದಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.