Publish Date: Sat, 02 Nov 2024 (13:06 IST)
Updated Date: Sat, 02 Nov 2024 (13:13 IST)
ಮುಂಬೈ: ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿಯೂ ಬಳಸಿಕೊಳ್ಳಲು ವಿಫಲರಾಗಿರುವ ಸರ್ಫರಾಜ್ ಖಾನ್ ಬಗ್ಗೆ ಈಗ ನೆಟ್ಟಿಗರು ಭಾರೀ ಟೀಕೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ನಲ್ಲೂ ಅವರು ಮತ್ತೊಮ್ಮೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿಮೊದಲ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಸರ್ಫರಾಜ್ ಎರಡನೇ ಇನಿಂಗ್ಸ್ ನಲ್ಲಿ ಶತಕ ಸಿಡಿಸಿ ತಂಡಕ್ಕೆ ಆಧಾರವಾಗಿದ್ದರು. ಆದರೆ ಕೆಎಲ್ ರಾಹುಲ್ ರನ್ನು ಹೊರಗಿಟ್ಟು ಎರಡನೇ ಪಂದ್ಯಕ್ಕೆ ಸರ್ಫರಾಜ್ ಖಾನ್ ಗೆ ಅವಕಾಶ ನೀಡಲಾಗಿತ್ತು. ಈ ಪಂದ್ಯದಲ್ಲಿ ಅವರು ಕೈ ಕೊಟ್ಟಿದ್ದರು. ಎರಡನೇ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 11, ಎರಡನೇ ಇನಿಂಗ್ಸ್ ನಲ್ಲಿ ಕೇವಲ 9 ರನ್ ಗೆ ವಿಕೆಟ್ ಒಪ್ಪಿಸಿದ್ದರು.
ಇದೀಗ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ತಂಡಕ್ಕೆ ಇಂದು ಸರ್ಫರಾಜ್ ಕಾಣಿಕೆ ಮುಖ್ಯವಾಗಿತ್ತು. ಅವರು ಸ್ವಲ್ಪ ರನ್ ಗಳಿಸಿದ್ದರೂ ತಂಡಕ್ಕೆ ಮಹತ್ವದ ಮುನ್ನಡೆ ಸಿಗುತ್ತಿತ್ತು. ಇದರ ಬೆನ್ನಲ್ಲೇ ನೆಟ್ಟಿಗರ ಆಕ್ರೋಶದ ಮೇರೆ ಮೀರಿದೆ.
ಕೆಎಲ್ ರಾಹುಲ್ ರಂತಹ ಅನುಭವಿಯ ಜಾಗದಲ್ಲಿ ಸ್ಥಾನ ಪಡೆದ ಸರ್ಫರಾಜ್ ಸಾಧನೆಯೇನು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಒಂದು ಪಂದ್ಯದಲ್ಲಿ ಆಡಿ ಉಳಿದ ಪಂದ್ಯಗಳಲ್ಲಿ ಕೈ ಕೊಡುವ ಸರ್ಫರಾಜ್ ಗಿಂತ ಕೆಎಲ್ ರಾಹುಲ್ ಬೆಟರ್ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.