Publish Date: Tue, 22 Apr 2025 (11:25 IST)
Updated Date: Tue, 22 Apr 2025 (11:27 IST)
ಬೆಂಗಳೂರು: ಐಪಿಎಲ್ ನಲ್ಲಿ ಸದಾ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಧೋನಿಯನ್ನು ಮಾತ್ರ ಹೊಗಳಿ ಅಟ್ಟಕ್ಕೇರಿಸಿ ಆರ್ ಸಿಬಿ ವಿರುದ್ಧ ಕಿಡಿ ಕಾರುವ ಅಂಬಟಿ ರಾಯುಡು ಇದೀಗ ಅಪರೂಪಕ್ಕೆ ಆರ್ ಸಿಬಿ ಬಗ್ಗೆ ಹೊಗಳಿಕೆಯ ಮಾತನಾಡಿದ್ದಾರೆ.
ಅಂಬಟಿ ರಾಯುಡು ಚೆನ್ನೈ ತಂಡದ ಮೇಲಿನ ಪ್ರೇಮ ಈಗ ಎಲ್ಲರಿಗೂ ಗೊತ್ತಿರುವಂತಹದ್ದೇ. ಈ ಐಪಿಎಲ್ ಗೆ ಮುನ್ನವೂ ಆರ್ ಸಿಬಿಯಂತಹ ತಂಡ ಕಪ್ ಗೆಲ್ಲಲ್ಲ, ಕೇವಲ ಮನರಂಜನೆಗಾಗಿಯಾದರೂ ಈ ತಂಡ ಐಪಿಎಲ್ ನಲ್ಲಿರಬೇಕು ಎಂದು ವ್ಯಂಗ್ಯ ಮಾಡಿದ್ದರು.
ಆದರೆ ಇದೀಗ ಚೆನ್ನೈ ತಂಡದ ಪ್ರದರ್ಶನ ಪಾತಾಳ ತಲುಪಿದೆ. ಇತ್ತ ಆರ್ ಸಿಬಿ ತವರಿನ ಪಂದ್ಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಗೆಲ್ಲುತ್ತಲೇ ಬಂದಿದೆ. ಹೀಗಾಗಿ ಈ ಅಂಬಟಿ ರಾಯುಡು ಪ್ಲೇಟ್ ಚೇಂಜ್ ಮಾಡಿದ್ದಾರೆ. ಆರ್ ಸಿಬಿಯನ್ನು ಹೊಗಳಿ ಅಚ್ಚರಿ ಮೂಡಿಸಿದ್ದಾರೆ.
ಈ ಬಾರಿ ಆರ್ ಸಿಬಿ ಪ್ಲೇ ಆಫ್ ಗೆ ಹೋಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದೇ ಪ್ರದರ್ಶನ ಮುಂದುವರಿಸಿದರೆ ಖಂಡಿತಾ ಪ್ಲೇ ಆಫ್ ಗೇರಲಿದೆ. ಪ್ಲೇ ಆಫ್ ಗೇರಿದರೆ ಈ ಬಾರಿ ಆರ್ ಸಿಬಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಲಿದೆ ಎಂದಿದ್ದಾರೆ. ಅವರ ಈ ಹೇಳಿಕೆ ಗಮನಿಸಿ ಇವರು ಅದೇ ಅಂಬಟಿ ರಾಯುಡು ಅವರಾ ಎಂದು ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.