ನವದೆಹಲಿ: ದೆಹಲಿಯಲ್ಲಿ ಬಿಜೆಪಿ ಬಹುಮತಗಳಿಸಿ ಅಧಿಕಾರಕ್ಕೆ ಬಂದರೂ ಇನ್ನೂ ಮುಖ್ಯಮಂತ್ರಿ ಯಾರು ಎಂಬ ಘೋಷಣೆಯಾಗಿಲ್ಲ. ಈ ಬಗ್ಗೆ ಯಾರೂ ಮೈಕ್ ಮುಂದೆ ಬಹಿರಂಗ ಹೇಳಿಕೆ ನೀಡದಂತೆ ಬಿಜೆಪಿ ಹೈಕಮಾಂಡ್ ಲಗಾಮು ಹಾಕಿದೆ.
ದೆಹಲಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಹಲವರ ಹೆಸರು ರೇಸ್ ನಲ್ಲಿದೆ. ಇದರಲ್ಲಿ ಮುಖ್ಯವಾಗಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ಸೋಲಿಸಿದ ಪರ್ವೇಶ್ ವರ್ಮ ಮತ್ತು ದೆಹಲಿ ಬಿಜೆಪಿ ನಾಯಕ ವೀರೇಂದ್ರ ಸಚ್ ದೇವ್ ಪ್ರಮುಖವಾಗಿ ಕೇಳಿಬರುತ್ತಿದೆ.
ಆದರೆ ಬಿಜೆಪಿಯಿಂದ ದೆಹಲಿಯ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಯಾರೂ ಮಾಧ್ಯಮ ಹೇಳಿಕೆಗಳನ್ನು ನೀಡಬಾರದು ಎಂದು ಹೈಕಮಾಂಡ್ ಈಗಾಗಲೇ ಎಚ್ಚರಿಕೆ ನೀಡಿದೆ. ಇದರಿಂದ ಪಕ್ಷದಲ್ಲಿ ಅನಗತ್ಯ ಗೊಂದಲಗಳು ಮೂಡುತ್ತವೆ ಎಂಬುದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನು, ಪ್ರಧಾನಿ ಮೋದಿ ವಿದೇಶ ಪ್ರವಾಸ ಕೈಗೊಳ್ಳಲಿದ್ದು, ಇದಾದ ಬಳಿಕವೇ ಹೊಸ ಮುಖ್ಯಮಂತ್ರಿ ಯಾರೆಂದು ಘೋಷಣೆಯಾಗಲಿದೆ. ಆದರೆ ದೆಹಲಿಯಲ್ಲಿ ಬಹಳ ವರ್ಷಗಳ ನಂತರ ಅಧಿಕಾರಕ್ಕೇರುತ್ತಿರುವ ಬಿಜೆಪಿ ಪ್ರಮಾಣ ವಚನ ಸಮಾರಂಭವನ್ನು ಅದ್ಧೂರಿಯಾಗಿಯೇ ನಡೆಸಲು ಸಿದ್ಧತೆ ನಡೆಸಿದೆ.