Publish Date: Sun, 09 Jun 2024 (13:23 IST)
Updated Date: Sun, 09 Jun 2024 (13:27 IST)
ನವದೆಹಲಿ: ಇಂದು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ನರೇಂದ್ರ ಮೋದಿಯವರ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಸಂಸದರಿಗೆ ಇದೀಗ ಮೋದಿ ಮನೆಯಲ್ಲಿ ಚಹಾ ಕೂಟ ಏರ್ಪಡಿಸಲಾಗಿದೆ.
ಮೋದಿ ಮನೆಯಲ್ಲಿನಡೆಯುತ್ತಿರುವ ಚಹಾ ಕೂಟಕ್ಕೆ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂಸದರಿಗೆ ಆಹ್ವಾನ ನೀಡಲಾಗಿದೆ. ಅದರಂತೆ ಪ್ರಮಾಣ ವಚನ ಸ್ವೀಕರಿಸಲಿರುವ ಸಂಸದರಿಗೆ ವಿಶೇಷ ಕರೆ ಕಳುಹಿಸಲಾಗಿತ್ತು. ಅವರೆಲ್ಲರೂ ಇಂದು ಚಹಾ ಕೂಟದಲ್ಲಿ ಭಾಗಿಯಾಗಿದ್ದಾರೆ.
ಆ ಪೈಕಿ ರಾಜ್ಯದಿಂದ ಎಚ್ ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಮತ್ತು ಶೋಭಾ ಕರಂದ್ಲಾಜೆ ಭಾಗಿಯಾಗಿದ್ದಾರೆ. ಹೀಗಾಗಿ ಈ ಮೂವರಿಗೆ ಮಂತ್ರಿಗಿರಿ ಸಿಗುವುದು ಪಕ್ಕಾ ಆಗಿದೆ. ಆದರೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿಗೆ ನಿರಾಸೆಯಾಗಿದೆ.
ಮೋದಿ ಕ್ಯಾಬಿನೆಟ್ ನಲ್ಲಿ ಎಲ್ಲಾ ಪಕ್ಷಗಳ ಮತ್ತು ಎಲ್ಲಾ ರಾಜ್ಯಗಳ ಸಂಸದರಿಗೂ ಅವಕಾಶ ನೀಡುವ ಪ್ರಯತ್ನ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕೇರಳದಲ್ಲಿ ಕಮಲವರಳಿಸಿದ ತ್ರಿಶ್ಶೂರ್ ಸಂಸದ, ನಟ ಸುರೇಶ್ ಗೋಪಿ, ತಮಿಳುನಾಡಿನಲ್ಲಿ ಕೊಯಮತ್ತೂರಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿರುವ ಅಣ್ಣಾಮಲೈ, ಪಿಯೂಶ್ ಗೋಯಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಜ್ಯೋತಿರಾಧಿತ್ಯ ಸಿಂಧಿಯಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಚಿರಾಗ್ ಪಾಸ್ವಾನ್, ರಾಮನಾಥ್ ಠಾಕೂರ್, ಜೀತಂ ರಾಮ್ ಮಾಂಝಿ,ಜಯಂತ್ ಚೌಧರಿ, ಅನುಪ್ರಿಯಾ ಪಟೇಲ್, ರಾಮಮೋಹನ್ ನಾಯ್ಡು ಮುಂತಾದವರು ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ಪ್ರಮುಖರು.