Publish Date: Sun, 13 Apr 2025 (10:04 IST)
Updated Date: Sun, 13 Apr 2025 (10:06 IST)
ನವದೆಹಲಿ: ಮುಂಬೈ ಉಗ್ರ ದಾಳಿಯ ರೂವಾರಿ ತಹವ್ವೂರ್ ರಾಣಾ ಎನ್ ಐಎ ಕಸ್ಟಡಿಯಲ್ಲಿದ್ದು ವಿಚಾರಣೆಗೊಳಪಡಿಸಲಾಗುತ್ತಿದೆ. ಈ ವೇಳೆ ಆತ ಅಧಿಕಾರಿಗಳ ಬಳಿ ಮೂರು ವಸ್ತುಗಳಿಗೆ ಬೇಡಿಕೆಯಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಎನ್ಐಎ ಕಚೇರಿಯಲ್ಲಿ ಬಿಗಿ ಬಂದೋಬಸ್ತ್ ನಲ್ಲಿ ರಾಣಾನನ್ನು ಇರಿಸಲಾಗಿದೆ. ಆತನಿಗೆ 14*14 ಕೊಠಡಿಯಲ್ಲಿ ಹಾಸಿಗೆ, ಸ್ನಾನ, ಊಟ ಎಲ್ಲದಕ್ಕೂ ವ್ಯವಸ್ಥೆ ಮಾಡಿಕೊಡಲಾಗಿದೆ. ಈತನ ಭೇಟಿಗೆ ಕೇವಲ 12 ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಭದ್ರತಾ ಕೊಠಡಿಯಲ್ಲಿ ಆತನಿಗೆ ಯಾವುದೇ ವಿಶೇಷ ಸೌಲಭ್ಯ ನೀಡಲಾಗಿಲ್ಲ. ಸಾಮಾನ್ಯ ಖೈದಿಯಂತೆ ಟ್ರೀಟ್ ಮಾಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ ಮೂರು ವಸ್ತುಗಳಿಗೆ ಆತ ಬೇಡಿಕೆಯಿಟ್ಟಿದ್ದಾನೆ ಎನ್ನಲಾಗಿದೆ.
ರಾಣಾ ಐದು ಬಾರಿ ನಮಾಜ್ ಮಾಡುತ್ತಾನೆ. ಇದಲ್ಲದೆ ಒಂದು ಕುರಾನ್ ಪುಸ್ತಕ, ಪೆನ್ನು ಮತ್ತು ಪೇಪರ್ ಗೆ ಬೇಡಿಕೆಯಿಟ್ಟಿದ್ದ. ಅದೆಲ್ಲವನ್ನೂ ಆತನಿಗೆ ಮಾನವೀಯತೆಯ ದೃಷ್ಟಿಯಿಂದ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.