ನವದೆಹಲಿ: ಮುಂಬೈ ಮೇಲೆ 2008 ರಲ್ಲಿ ನಡೆಸಿದ ಉಗ್ರ ದಾಳಿಯ ಪ್ರಮುಖ ರೂವಾರಿ ರಾಣಾನನ್ನು ಎನ್ಐಎ ಅಧಿಕಾರಿಗಳು ಅಮೆರಿಕಾದಿಂದ ಭಾರತಕ್ಕೆ ಕರೆತಂದಿದ್ದಾರೆ. ಆದರೆ ಆತನನ್ನು ಭಾರತಕ್ಕೆ ಕರೆತಂದ ಸುದ್ದಿ ಬೆನ್ನಲ್ಲೇ ಸಾರ್ವಜನಿಕರು ಆತನಿಗೆ ಬಿರಿಯಾನಿ ಕೊಟ್ಟು ಕೂರಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2008 ರಲ್ಲಿ ಮುಂಬೈ ಮೇಲೆ ನಡೆದ ಉಗ್ರ ದಾಳಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಸಮುದ್ರ ಮಾರ್ಗ ಮೂಲಕ ಮುಂಬೈಗೆ ಕಾಲಿಟ್ಟಿದ್ದು ಉಗ್ರರು ನೂರಾರು ಜನರನ್ನು ಹತ್ಯೆ ಮಾಡಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ರಾಣಾ ಕೂಡಾ ಒಬ್ಬ.
ಈತನನ್ನು ಅಮೆರಿಕಾ ಭಾರತಕ್ಕೆ ಗಡೀಪಾರು ಮಾಡಿದೆ. ಇದರ ಬೆನ್ನಲ್ಲೇ ಎನ್ಐಎ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಆತನನ್ನು ಭಾರತಕ್ಕೆ ಕರೆತಂದಿದ್ದಾರೆ. ಇದೀಗ ಆತನನ್ನು ತಿಹಾರ್ ಜೈಲಿನಲ್ಲಿ ಇಡಲಾಗುತ್ತದೆ. ಆತನಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಿಕ್ರಿಯಿಸಿರುವ ಜನರು, ನೂರಾರು ಜನರ ಸಾವಿಗೆ ಕಾರಣನಾಗಿರುವ ಈ ಉಗ್ರನಿಗೆ ಬಿರಿಯಾನಿ, ರಾಜಾತಿಥ್ಯ ಕೊಟ್ಟು ಜೈಲಿನಲ್ಲಿ ಕೂರಿಸಬೇಡಿ. ತಕ್ಷಣವೇ ವಿಚಾರಣೆ ಮುಗಿಸಿ ನೇಣಿಗೆ ಹಾಕಿ ಎಂದು ಆಗ್ರಹಿಸಿದ್ದಾರೆ. ಆಗ ಮಾತ್ರ ಅಂದು ಹುತಾತ್ಮರಾದ ಯೋಧರು, ಪೊಲೀಸರು ಮತ್ತು ಜನರಿಗೆ ನ್ಯಾಯ ಸಿಗಲು ಸಾಧ್ಯ ಎಂದು ಆಗ್ರಹಿಸಿದ್ದಾರೆ.