ಅಹಮ್ಮದಾಬಾದ್: ನಿಮ್ಮ ಎದುರೇ ಸಂಸತ್ತಿನಲ್ಲಿ ಜಾತಿಗಣತಿ ಬಿಲ್ ಪಾಸ್ ಮಾಡುತ್ತಾರೆ ನೋಡುತ್ತಿರಿ ಎಂದು ಮೋದಿಗೆ ರಾಹುಲ್ ಗಾಂಧಿ ಇಂದು ಸವಾಲು ಹಾಕಿದ್ದಾರೆ. ಅವರು ಇಂದು ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ್ದಾರೆ.
ದೇಶದಲ್ಲಿ ಜಾತಿಗಣತಿ ಮಾಡುವುದು ಅಗತ್ಯವಾಗಿದೆ. ಇದರಿಂದ ಎಲ್ಲಾ ವರ್ಗದ ಜನರಿಗೆ ಸಮಪಾಲು ಸಿಗಲಿದೆ. ಆದರೆ ಬಿಜೆಪಿ ಮತ್ತು ಆರ್ ಎಸ್ಎಸ್ ಗೆ ಇದು ಬೇಕಾಗಿಲ್ಲ. ಅಲ್ಪ ಸಂಖ್ಯಾತರಿಗೂ ಸಮಪಾಲು ಸಿಗುವುದು ಅವರಿಗೆ ಇಷ್ಟವಿಲ್ಲ. ಈ ಕಾರಣಕ್ಕೆ ಜಾತಿಗಣತಿ ಮಾಡಲ್ಲ ಎಂದರು.
ನಾವು ತೆಲಂಗಾಣದಲ್ಲಿ ಜಾತಿಗಣತಿಯನ್ನು ಪರಿಣಾಮಕಾರಿಯಾಗಿ ಮಾಡಿದ್ದೇವೆ. ದೇಶದಲ್ಲೂ ಜಾತಿಗಣತಿ ಮಾಡಬೇಕು ಎಂದು ನಾನು ಪ್ರಧಾನಿ ಮೋದಿಗೆ ಬೇಡಿಕೆಯಿಟ್ಟಿದ್ದೆ. ಆಗ ನಮ್ಮ ದೇಶದ ಸಂಪತ್ತು ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರಿಗೆ ಎಷ್ಟೆಷ್ಟು ಪಾಲು ಸಿಗುತ್ತಿದೆ ಎಂಬುದು ಬಯಲಾಗಲಿದೆ. ಆದರೆ ಪ್ರಧಾನಿ ಮೋದಿ ಮತ್ತು ಆರ್ ಎಸ್ಎಸ್ ನವರು ಇದನ್ನು ತಿರಸ್ಕರಿಸಿದರು. ಯಾಕೆಂದರೆ ಅವರಿಗೆ ಸಮವಾಗಿ ಸಂಪತ್ತು ಹಂಚಿಕೆಯಾಗುವುದು ಇಷ್ಟವಿಲ್ಲ. ಹೀಗಾಗಿ ನಿಮ್ಮ ಎದುರೇ ನಾವು ಸಂಸತ್ತಿನಲ್ಲಿ ಜಾತಿಗಣತಿ ಬಿಲ್ ಪಾಸ್ ಮಾಡಲಿದ್ದೇವೆ ಎಂದಿದ್ದೆ ಎಂದಿದ್ದಾರೆ.
ತೆಲಂಗಾಣದಲ್ಲಿ ಮಾಡಿದ್ದನ್ನು ಕಾಂಗ್ರೆಸ್ ದೇಶದಾದ್ಯಂತ ಮಾಡಲಿದೆ. ನಾವು 50% ಮೀಸಲಾತಿಯ ಗೋಡೆಯನ್ನು ಕೆಡವಲಿದ್ದೇವೆ ಎಂದಿದ್ದಾರೆ. ಇನ್ನು ವಕ್ಫ್ ಬಿಲ್ ಬಗ್ಗೆ ಮಾತನಾಡಿರುವ ಅವರು ಇದು ಮುಸ್ಲಿಂ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಮಾಡಿದ ದಾಳಿಯಾಗಿದೆ ಎಂದಿದ್ದಾರೆ.