Publish Date: Thu, 02 Sep 2021 (11:16 IST)
Updated Date: Thu, 02 Sep 2021 (11:18 IST)
ಬೆಂಗಳೂರು: ನಕಲಿ ವೀಸಾ ತಯಾರಿಸಿಕೊಟ್ಟು ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಖತರ್ನಾಕ್ ಆರೋಪಿಯೋರ್ವನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕೇರಳ ಮೂಲದ ನಿಪುಣ್ ಎಂದು ತಿಳಿದು ಬಂದಿದೆ. ಕೇವಲ ಪಿಯುಸಿ ಓದಿರುವ ಈತ ಫೇಸ್ ಬುಕ್ ಮೂಲಕ ಜನರನ್ನು ಸಂಪರ್ಕಿಸಿ ವೀಸಾ ತಯಾರಿಸಿಕೊಡಿಸುವುದಾಗಿ ಹೇಳಿ ವಾಟ್ಸಪ್ ಡೀಟೆಲ್ ಕಲೆಕ್ಟ್ ಮಾಡುತ್ತಿದ್ದ. ಬಳಿಕ ಹುಳಿಮಾವಿನ ತನ್ನ ಮನೆಯಲ್ಲಿಯೇ ನಕಲಿ ವೀಸಾ ತಯಾರಿಸಿ ವಾಟ್ಸಪ್ ನಲ್ಲಿ ನಕಲಿ ಪಿಡಿಎಫ್ ಕಳಿಹಿಸಿ ವಂಚಿಸುತ್ತಿದ್ದ.
ಒಂದು ವೀಸಾಗಾಗಿ 50,000 ರೂಪಾಯಿಯಿಂದ 2 ಲಕ್ಷದವರೆಗೂ ಒಬ್ಬರಿಗೆ ಹಣ ಪಡೆದು ಮೋಸ ಮಾಡುತ್ತಿದ್ದ. ಖಚಿತ ಮಾಹಿತಿ ಆದರಿಸಿ ಹುಳಿಮಾವಿನ ಬಳಿಯ ಆರೋಪಿ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ನಿಪುಣ್ ನನ್ನು ಬಂಧಿಸಿದ್ದಾರೆ.
ಆರೋಪಿ ನಿಪುಣ್ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ನಗರದ ವಿವಿಧ ಕಾಲೇಜ್ ಗಳಲ್ಲಿ ಸೀಟು ಕೊಡಿಸುವುದಾಗಿಯೂ ವಂಚಿಸುತ್ತಿದ್ದ ಎನ್ನಲಾಗಿದೆ.