Publish Date: Fri, 26 Apr 2019 (14:59 IST)
Updated Date: Fri, 26 Apr 2019 (15:01 IST)
ಪುಲ್ವಾಮಾ ದಾಳಿ ಕುರಿತು ಸಂಚು ತಮಗೆ ಎರಡು ವರ್ಷಗಳ ಹಿಂದೆಯೇ ತಿಳಿದಿತ್ತು ಎಂದು ಹೇಳಿಕೆ ನೀಡಿರುವ ಸಿಎಂ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಬಿಜೆಪಿ ದೂರು ನೀಡಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಚಿ. ನಾ. ರಾಮು ಪೊಲೀಸ್ ಠಾಣೆಗೆ ತೆರಳಿ ಠಾಣಾಧಿಕಾರಿಗೆ ದೂರು ಸಲ್ಲಿಸಿದರು. ಪುಲ್ವಾಮ ದಾಳಿ ನಡೆಯುತ್ತದೆ ಹಾಗೂ ಲೋಕಸಭಾ ಚುನಾವಣೆಗಿಂತ ಮೊದಲೇ ನಡೆಯುತ್ತದೆ ಎಂದು ಎರಡು ವರ್ಷಗಳ ಹಿಂದೆಯೇ ನನಗೆ ತಿಳಿದಿತ್ತು. ನಿವೃತ್ತ ಸೈನಿಕ ಅಧಿಕಾರಿಯೊಬ್ಬರು ನನಗೆ ಈ ವಿಚಾರ ತಿಳಿಸಿದ್ದರು ಎಂದು ಕುಮಾರಸ್ವಾಮಿ ತಿಳಿಸಿದ್ದರು. ಈ ವಿವರ ತಿಳಿದಿದ್ದೂ ಅವರು ವಿವರ ಮುಚ್ಚಿಟ್ಟದ್ದು ಸರಿಯಲ್ಲ.
ಸಂವಿಧಾನ ಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿದ ಅವರು, ಕೇಂದ್ರ ಸರ್ಕಾರಕ್ಕೆ ಮಾಹಿತಿ ಕೊಡಬೇಕಿತ್ತು. ಅವರು ಈ ಮಾಹಿತಿ ನೀಡಿದ್ದರೆ ಪುಲ್ವಾಮಾ ಘಟನೆ ನಡೆಯುತ್ತಲೇ ಇರಲಿಲ್ಲವೇನೋ. ಸಿಎಂ ಹೇಳಿಕೆಯನ್ನು ನಾವು ದಾಖಲಿಸಿಕೊಂಡಿದ್ದೇವೆ. ಸಿಎಂ ಮಾತಿನ ಸಿಡಿ ಮಾಡಿಕೊಂಡಿದ್ದು ಈ ದಾಖಲೆಯನ್ನೂ ಪೊಲೀಸ್ ಅಧಿಕಾರಿಗಳಿಗೆ ನೀಡಿದ್ದೇವೆ ಎಂದರು.
ಸಿಎಂ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ, ದೇಶದ್ರೋಹ, ಭಯೋತ್ಪಾದಕ ನಿಗ್ರಹ ಕಾಯ್ದೆ, ಕಾನೂನು ಬಾಹಿರ ಚಟುವಟಿಕೆ ಗಳ ನಿಗ್ರಹ ಕಾಯ್ದೆ ಅಡಿ ನಾವು ದೂರು ಸಲ್ಲಿಸಿದ್ದೇವೆ. ಅಲ್ಲದೇ ಭಾರತೀಯ ದಂಡಸಂಹಿತೆ 123, ಕಲಂ 121 ಎ ಅಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ. ಪರಿಶೀಲಿಸುವ ಭರವಸೆ ಸಿಕ್ಕಿದೆ. ಇದೇ ಆಧಾರದ ಅಡಿ ನ್ಯಾಯಲಯ, ರಾಜ್ಯಪಾಲರು, ರಾಷ್ಟ್ರಪತಿ ಗಳವರೆಗೂ ನ್ಯಾಯಕ್ಕಾಗಿ ಮನವಿ ಮಾಡುತ್ತೇವೆ ಎಂದರು.