ಪಾಟ್ನಾ: ಪಹಲ್ಗಾವ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಉಗ್ರರನ್ನು ಒಬ್ಬೊಬ್ಬರನ್ನೂ ಹುಡುಕಿ ಹೊಡೆಯಲಿದ್ದೇವೆ. ಒಬ್ಬೊಬ್ಬರಿಗೂ ನಿರೀಕ್ಷೆಯೇ ಮಾಡಿರದ ಸಾವು ಕರುಣಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ಇಂದು ಬಿಹಾರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಉಗ್ರರ ದಮನಕ್ಕೆ ಶಪಥ ಮಾಡಿದ್ದಾರೆ. ಮೊನ್ನೆ ಪಹಲ್ಗಾವ್ ನಲ್ಲಿ ನಡೆದ ಉಗ್ರರ ದಾಳಿಯಿಂದಾಗಿ 26 ಮಂದಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನದೊಂದಿಗೆ ಎಲ್ಲಾ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡು ಗಡಿ ಬಂದ್ ಮಾಡಿ ಭಾರತ ತಕ್ಕ ತಿರುಗೇಟು ನೀಡಿದೆ.
ಇದಲ್ಲದೆ ಈ ದಾಳಿಗೆ ಕಾರಣರಾದ ಉಗ್ರರನ್ನು ಸುಮ್ಮನೇ ಬಿಡಲಲ್ ಎಂದು ಮೋದಿ ಗುಡುಗಿದ್ದಾರೆ. ಯಾರು ಈ ದಾಳಿಯ ಹಿಂದಿದ್ದಾರೋ ಅವರಿಗೆ ಕಲ್ಪನೆಗೂ ಮೀರಿದ ಶಿಕ್ಷೆ ಕೊಡಲಿದ್ದೇವೆ. ಉಗ್ರರ ಹೆಡೆಮುರಿ ಕಟ್ಟಿ ನಮ್ಮ ದೇಶದಿಂದ ಹೊರ ಹಾಕುವ ಸಮಯ ಬಂದಿದೆ. ಭಾರತೀಯರೆಲ್ಲರೂ ಒಗ್ಗಟ್ಟಿನಿಂದಿದ್ದರೆ ಉಗ್ರರನ್ನು ದಮನಿಸುವುದು ಕಷ್ಟವಲ್ಲ. ಈ ಭೂಮಿಯಿಂದಲೇ ಅವರನ್ನು ಹೊರಗಟ್ಟುತ್ತೇವೆ ಎಂದಿದ್ದಾರೆ.
ಈ ದಾಳಿಯಲ್ಲಿ ಮಾತನಾಡುವವರು ಹಿಂದಿ, ಮರಾಠಿ, ಗುಜರಾತಿ, ಒಡಿಯಾ, ಬಾಂಗ್ಲಾ ಹೀಗೆ ಒಬ್ಬೊಬ್ಬರು ಒಂದೊಂದು ಭಾಷೆ ಮಾತನಾಡುವವರಾಗಿದ್ದಾರೆ. ಆದರೆ ಅವರ ಸಾವಿಗೆ ಆಕ್ರೋಶ ಮಾತ್ರ ಕಾರ್ಗಿಲ್ ನಿಂದ ಕನ್ಯಾಕುಮಾರಿಯವರೆಗೆ ಒಂದೇ ಆಗಿದೆ.
ಭಯೋತ್ಪಾದನೆ ಎದುರು ಭಾರತ ಎಂದೂ ತಲೆಭಾಗುವುದಿಲ್ಲ. ಭಯೋತ್ಪಾದನೆ ತೊಲಗಿಸುವವರೆಗೂ ಬಿಡುವುದಿಲ್ಲ. ಈ ದಾಳಿ ಅಮಾಯಕ ಪ್ರವಾಸಿಗರ ಮೇಲೆ ಮಾತ್ರವಲ್ಲ, ಭಾರತದ ಆತ್ಮದ ಮೇಲೆ ನಡೆದಿದೆ. ಇದರ ಸಂಚು ರೂಪಿಸಿದವರಿಗೆ ಊಹಿಸಲಾಗದ ಶಿಕ್ಷೆ ಕೊಡುತ್ತೇವೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡಿರುವ ಮತ್ತು ಗಾಯಗೊಂಡವರ ಜೊತೆಗೆ ಇಡೀ ದೇಶವಿದೆ ಎಂದು ಮೋದಿ ಹೇಳಿದ್ದಾರೆ.