ನವದೆಹಲಿ: ಶಿವಸೇನೆ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ರಾವುತ್ ಅವರು ಆರೋಗ್ಯದ ಕಾರಣದಿಂದ ಸಾರ್ವಜನಿಕ ಜೀವನದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
ತಮ್ಮ "ಸ್ನೇಹಿತರು, ಕುಟುಂಬ ಮತ್ತು ಪಕ್ಷದ ಕಾರ್ಯಕರ್ತರಿಗೆ" ಮತ್ತು ಮೈಕ್ರೋಬ್ಲಾಗಿಂಗ್ ಸೈಟ್ X ನಲ್ಲಿ ಪೋಸ್ಟ್ ಮಾಡಿದ ಮರಾಠಿ ಪತ್ರದಲ್ಲಿ, ರಾವುತ್ ಅವರು "ಕೆಲವು ಗಂಭೀರವಾದ ಆರೋಗ್ಯ ತೊಡಕುಗಳನ್ನು" ಎದುರಿಸುತ್ತಿದ್ದಾರೆ ಮತ್ತು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ಶೀಘ್ರದಲ್ಲೇ ಚೇತರಿಸಿಕೊಂಡು ಸಕ್ರಿಯ ರಾಜಕೀಯ ಜೀವನಕ್ಕೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ನೀವೆಲ್ಲರೂ ಯಾವಾಗಲೂ ನನ್ನ ಕಡೆಗೆ ನಂಬಿಕೆ ಮತ್ತು ಪ್ರೀತಿಯನ್ನು ತೋರಿಸಿದ್ದೀರಿ, ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಆದಾಗ್ಯೂ, ಇತ್ತೀಚೆಗೆ ನಾನು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದೆ. ಚಿಕಿತ್ಸೆ ನಡೆಯುತ್ತಿದೆ, ಮತ್ತು ನಾನು ಚೇತರಿಸಿಕೊಂಡು ಶೀಘ್ರದಲ್ಲೇ ಹಿಂತಿರುಗುತ್ತೇನೆ" ಎಂದು ರಾವುತ್ ಮರಾಠಿಯಲ್ಲಿ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಫೋಸ್ಟ್ ಹಂಚಿ, ನಿಮ್ಮ ಶೀಘ್ರ ಚೇತರಿಕೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ, ಸಂಜಯ್ ರಾವತ್ ಜಿ ಎಂದು ಹಾರೈಸಿದ್ದಾರೆ.