ಪಾಟ್ನಾ: ಅಂಬೇಡ್ಕರ್ ಫೋಟೋವನ್ನು ಕಾಲ ಬಳಿಯಿಟ್ಟು ಅದರ ಮುಂದೆ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಕಾಲ ಮೇಲೆ ಕಾಲು ಹಾಕಿ ಕುಳಿತಿರುವ ವಿಡಿಯೋ ವೈರಲ್ ಆಗಿತ್ತು. ಇದರ ಬಗ್ಗೆ ಈಗ ಪ್ರಧಾನಿ ಮೋದಿ ಇಂದು ಬಿಹಾರದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದಲ್ಲಿ ಇಂದು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಮೋದಿ, ಆರ್ ಜೆಡಿ ಮುಖ್ಯಸ್ಥನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಅವರಿಗೆ ದಲಿತರ ಮೇಲೆ ಎಷ್ಟು ಕೀಳು ಮನೋಭಾವವಿದೆ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
ಇತ್ತೀಚೆಗೆ ಲಾಲೂ ಯಾದವ್ ಅವರು ಬಾಬಾ ಸಾಹೇಬರ ಫೋಟೋ ಮುಂದೆ ಯಾವ ರೀತಿ ಕೂತಿದ್ದರು ಎಂಬುದನ್ನು ಇಡೀ ದೇಶ ಗಮನಿಸಿದೆ. ಇದಕ್ಕೆಲ್ಲಾ ಅವರು ಕ್ಷಮೆಯನ್ನೂ ಕೇಳಲ್ಲ. ಯಾಕೆಂದರೆ ಅವರಿಗೆ ದಲಿತರ ಬಗ್ಗೆ ಅಷ್ಟು ಅಸಡ್ಡೆಯಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಹುಟ್ಟುಹಬ್ಬದ ಆಚರಣೆ ವೇಳೆ ಲಾಲೂ ಯಾದವ್ ಕುರ್ಚಿಯೊಂದರ ಮೇಲೆ ಕಾಲು ಹಾಕಿ ಕಾಲ ಮೇಲೆ ಕಾಲು ಹಾಕಿ ಕೂತಿರುತ್ತಾರೆ. ಈ ವೇಳೆ ಬೆಂಬಲಿಗರೊಬ್ಬರು ಅಂಬೇಡ್ಕರ್ ಫೋಟೋ ಹಿಡಿದುಕೊಂಡು ಫೋಟೋಗೆ ಪೋಸ್ ಕೊಡಲು ಬರುತ್ತಾರೆ. ಅವರು ಅಂಬೇಡ್ಕರ್ ಫೋಟೋವನ್ನು ಅದೇ ಕುರ್ಚಿಯ ಮೇಲೆ ಇಡುತ್ತಾರೆ. ಅಂಬೇಡ್ಕರ್ ಫೋಟೋಗೆ ಲಾಲೂ ಅವಮಾನ ಮಾಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.