ಮಂಡ್ಯ: ನಾಯಕತ್ವ ಬದಲಾವಣೆ ವಿಚಾರ ಜೋರಾಗಿ ಸದ್ದು ಮಾಡುತ್ತಿರುವಾಗಲೇ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅವರು ನನ್ನ ಹೃದಯ ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಬಯಸುತ್ತಿದೆ ಎಂದಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಪಕ್ಷಕ್ಕಾಗಿ ದುಡಿದಿರುವ ಡಿ.ಕೆ ಶಿವಕುಮಾರ್ ಅವರು ಜೈಲಿಗೂ ಹೋಗಿದ್ದಾರೆ. ನನ್ನ ವೈಯಕ್ತಿಕ ಕಷ್ಟಕಾಲದಲ್ಲಿ ಜೊತೆಗೆ ನಿಂತಿದ್ದಾರೆ. ಅವರಿಗೆ ಸಿಎಂ ಸ್ಥಾನ ಸಿಗಬೇಕು. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಇಬ್ಬರು ನನಗೆ ಸಮಾನರಾಗಿದ್ದು, ಇಬ್ಬರ ಕೊಡುಗೆ ಪಕ್ಷಕ್ಕೆ ಅಪಾರವಾಗಿದೆ ಎಂದರು.
140 ಜನ ಶಾಸಕರು ಇಬ್ಬರ ಪರವಾಗಿ ಇದ್ದಾರೆ. ಆದಷ್ಟು ಬೇಗ ಎಲ್ಲವೂ ಒಳ್ಳೆಯದಾಗುತ್ತದೆ, ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದರು.
ಕೋರ್ಟ್ ಕೆಲಸದ ನಿಮಿತ್ತ ನಾನು ದೆಹಲಿಗೆ ಹೋಗಿದ್ದು, ದೇವರಾಣೆ ನನಗೆ ಇತರ ಶಾಸಕರು ಬರುವ ವಿಚಾರ ಗೊತ್ತಿರಲಿಲ್ಲ. ನಾವು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದು, ಮಂಡ್ಯ ಜಿಲ್ಲೆಗೆ ಎರಡು ಸಚಿವ ಸ್ಥಾನ ಕೇಳಲು ಅಷ್ಟೇ ಎಂದರು.