ಬೆಂಗಳೂರು: ರಾಜ್ಯದಲ್ಲಿ ಈಗ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಎರಡೂವರೆ ವರ್ಷ ಕಳೆಯುವಷ್ಟರಲ್ಲಿ ಕುರ್ಚಿ ಗಲಾಟೆ ಶುರುವಾಗಿದೆ. ಇದರ ಬಗ್ಗೆ ಜನ ಏನಂತಿದ್ದಾರೆ? ಇಲ್ಲಿದೆ ವಿಶ್ಲೇಷಣೆ.
ಈ ಹಿಂದೆ ಬಿಜೆಪಿ ಸರ್ಕಾರ ಯಡಿಯೂರಪ್ಪನವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತ್ತು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದ ಖುಷಿ ಹೆಚ್ಚು ದಿನ ಇರಲಿಲ್ಲ. ಯಾಕೆಂದರೆ ಬಿಜೆಪಿಯಲ್ಲಿ ಹಲವು ಬಣಗಳು ಸೃಷ್ಟಿಯಾಗಿ ಕೊನೆಗೆ ಅಧಿಕಾರವೇ ಕಳೆದುಕೊಳ್ಳುವಂತಾಯಿತು. ರಾಜ್ಯಕ್ಕೆ ಬಿಜೆಪಿ ನಾಯಕರಾದ ಅಡ್ವಾಣಿಯವರಂತಹವರೇ ಬಂದು ಭಿನ್ನಮತ ಶಮನ ಮಾಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಈಗ ಕಾಂಗ್ರೆಸ್ ನಲ್ಲೂ ಅದೇ ಕತೆಯಾಗುತ್ತಿದೆ. ದಾಖಲೆಯ ಸ್ಥಾನಗಳೊಂದಿಗೆ ಅಧಿಕಾರಕ್ಕೇರಿದರೂ ಕಾಂಗ್ರೆಸ್ ನಲ್ಲಿ ಈಗ ಡಿಕೆಶಿ ಮತ್ತು ಸಿದ್ದರಾಮಯ್ಯ ಎರಡು ಬಣಗಳಾಗಿವೆ. ಎರಡೂವರೆ ವರ್ಷ ಕಳೆದ ಬೆನ್ನಲ್ಲೇ ಈಗ ರಾಜ್ಯದ ಕಾಂಗ್ರೆಸ್ ನಾಯಕರು ಆಡಳಿತ, ಅಭಿವೃದ್ಧಿ ಎಲ್ಲವನ್ನೂ ಮರೆತು ಕುರ್ಚಿ ಬಡಿದಾಟ ಶುರು ಮಾಡಿದ್ದಾರೆ.
ಇದರ ಬಗ್ಗೆ ಜನ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯವರೂ ಇದೇ ರೀತಿ ಕಿತ್ತಾಡಿಕೊಂಡು ಅಧಿಕಾರ ಕಳೆದುಕೊಂಡರು. ನೀವೂ ಇದನ್ನೇ ಮಾಡಿದರೆ ಮುಂದೆ ನಿಮ್ಮ ಕತೆಯೂ ಬಿಜೆಪಿಯಂತೇ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಕೆಲವರು ಅಧಿಕಾರಕ್ಕೆ ಬರಲು ಡಿಕೆ ಶಿವಕುಮಾರ್ ಶ್ರಮವೇ ಕಾರಣ. ಹಾಗಿರುವಾಗ ಅವರಿಗೆ ಸಿಎಂ ಪಟ್ಟ ಬಿಟ್ಟುಕೊಡುವುದು ನ್ಯಾಯವಲ್ಲವೇ ಎಂದು ಕೇಳಿದ್ದಾರೆ. ಇನ್ನು, ಕೆಲವರು ನಿಮ್ಮ ಕುರ್ಚಿ ಬಡಿದಾಟದಿಂದ ಜನರಿಗೆ ಮನರಂಜನೆ ಸಿಗುತ್ತಿದೆ ಅಷ್ಟೇ. ಜನರ ಸಮಸ್ಯೆ ಕೇಳೋರೇ ಇಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ.