ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಬಣ ಬಡಿದಾಟವೇ ಇಲ್ಲ. ಇದೆಲ್ಲಾ ಬಿಜೆಪಿ ಮತ್ತು ಮಾಧ್ಯಮಗಳ ಸೃಷ್ಟಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಡಿಕೆಶಿ ಮತ್ತು ಸಿದ್ದು ಬಣದ ನಡುವೆ ತಿಕ್ಕಾಟ, ಬಲ ಪ್ರದರ್ಶನ ನಡೆಯುತ್ತಿರುವುದು ಕಣ್ಣಿಗೆ ರಾಚುತ್ತಿದೆ. ಹಾಗಿದ್ದರೂ ಇದನ್ನು ಅಲ್ಲಗಳೆದಿರುವ ರಣದೀಪ್ ಸುರ್ಜೇವಾಲ ಇದಕ್ಕೆ ಬಿಜೆಪಿಯವರು ಕಾರಣ ಎಂದಿದ್ದಾರೆ.
ಕರ್ನಾಟಕ ಬಿಜೆಪಿಯಲ್ಲಿ ಬಣ ರಾಜಕೀಯ ನಡೆಯುತ್ತಿದೆ. ಒಂದು ವರ್ಗದ ಮಾಧ್ಯಮದವರೂ ಕಾಂಗ್ರೆಸ್ ಮೇಲೆ ಅಪಪ್ರಚಾರ ನಡೆಸಲು ಯತ್ನಿಸುತ್ತಿದ್ದಾರೆ. ಇದರ ಬಗ್ಗೆ ಸಿಎಂ ಮತ್ತು ಡಿಸಿಎಂ ಜೊತೆ ಮಾತನಾಡಿದ್ದೇನೆ. ಅವರು ಇದನ್ನು ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿ ಮತ್ತು ಸರ್ಕಾರ ದುರ್ಬಲಗೊಳಿಸುವುದೇ ಇವರ ಉದ್ದೇಶ. ಇದರ ಜೊತೆಗೆ ಕಾಂಗ್ರೆಸ್ ನ ಕೆಲವು ನಾಯಕರ ಅನಗತ್ಯ ಹೇಳಿಕೆಗಳು ಊಹಾಪೋಹಗಳು ಸೃಷ್ಟಿಯಾಗುವಂತೆ ಮಾಡುತ್ತಿವೆ ಅಷ್ಟೇ ಎಂದು ತಿಪ್ಪೇ ಸಾರಿದ್ದಾರೆ.
ಆದರೆ ಡಿಕೆ ಶಿವಕುಮಾರ್ ಬೆಂಬಲಿತ ಕೆಲವು ನಾಯಕರು ದೆಹಲಿಗೆ ಭೇಟಿ ನೀಡಿದ್ದು, ಸ್ವತಃ ಡಿಕೆಶಿ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಶಾಸಕರಾದ ವೀರೇಂದ್ರ ಪಪ್ಪಿ ಮತ್ತು ವಿನಯ್ ಕುಲಕರ್ಣಿಯವರನ್ನು ಭೇಟಿ ಮಾಡಿದ್ದಾರೆ. ಇನ್ನೊಂದೆಡೆ ಸತೀಶ್ ಜಾರಕಿಹೊಳಿ ನೇತತ್ವದಲ್ಲಿ ಡಿನ್ನರ್ ಮೀಟಿಂಗ್ ನಡೆಯುತ್ತದೆ.