ಬೆಂಗಳೂರು: ದೇವೇಗೌಡರ ಮಕ್ಕಳು ನನ್ನ ಸಿಎಂ ಆಗಲು ಬಿಡುತ್ತಿರಲಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಜೆಡಿಎಸ್ ಅಧಿಕೃತ ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ತಿರುಗೇಟು ನೀಡಿದೆ.
ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ನಾನು ಈಗಲೂ ಜೆಡಿಎಸ್ ನಲ್ಲಿದ್ದಿದ್ದರೆ ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ. ಯಾಕೆಂದರೆ ದೇವೇಗೌಡರು ಮತ್ತು ಮಕ್ಕಳು ನನ್ನನ್ನು ಸಿಎಂ ಆಗಲು ಬಿಡುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.
ಅವರ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ಉಂಡ ಮನೆಗೆ ದ್ರೋಹ ಬಗೆಯುವವರು ಎಂದಿದೆ. ಉಂಡು ಬೆಳೆದ ಜೆಡಿಎಸ್ ಮನೆಗೆ ದ್ರೋಹ ಬಗೆಯುವುದು ಅಲ್ಲದೆ, ಅಪಪ್ರಚಾರ ಮಾಡುವ ನೀಚ ಬುದ್ಧಿಯನ್ನು ಬಿಡಿ ಸಿದ್ದರಾಮಯ್ಯನವರೇ.
ನೀವು ಈ ಮಟ್ಟಕ್ಕೆ ಬೆಳೆಯಲು ಕಾರಣ ಜೆಡಿಎಸ್ ಪಕ್ಷ ಮತ್ತು ಶ್ರೀ ಹೆಚ್.ಡಿ.ದೇವೇಗೌಡರು ಎನ್ನುವುದನ್ನು ಮರೆಯಬೇಡಿ. ಮುಖ್ಯಮಂತ್ರಿ ಆಗಲು ಖರ್ಗೆ, ಪರಮೇಶ್ವರ್ ಅವರಂತಹ ಹಿರಿಯ ದಲಿತನಾಯಕರನ್ನು ತುಳಿದ ಮನೆಹಾಳು ಬುದ್ಧಿಯನ್ನು ಬಿಡಿ ಸಿದ್ದರಾಮಯ್ಯ!
ಚುನಾವಣೆಗಳಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಹಳ್ಳ ತೋಡಿ, ಅಧಿಕಾರದ ಪರಮ ಸುಖ ಅನುಭವಿಸುತ್ತಿರುವ ಮಜಾವಾದಿಯ ಭಸ್ಮಾಸುರ ಗುಣ ಈಗ ಮೂಲ ಕಾಂಗ್ರೆಸ್ಸಿಗರಿಗೆ ಅರ್ಥವಾಗಿ ಸಿಡಿದೆದ್ದಿದ್ದಾರೆ ಎಂದು ಜೆಡಿಎಸ್ ಕಿಡಿ ಕಾರಿದೆ.