Publish Date: Tue, 16 Sep 2025 (09:23 IST)
Updated Date: Tue, 16 Sep 2025 (09:29 IST)
ಬೆಂಗಳೂರು: ಕರ್ನಾಟಕದಲ್ಲಿ ಧರ್ಮ, ಶೈಕ್ಷಣಿಕ, ಸಾಮಾಜಿಕ ಹಿನ್ನಲೆಯಲ್ಲಿ ಜಾತಿ ಗಣತಿ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಕ್ರಿಶ್ಚಿಯನ್ ಧರ್ಮಕ್ಕೆ ಹಿಂದೂಗಳ ಉಪಜಾತಿ ಸೇರಿಸಿರುವುದು ಬಿಜೆಪಿ ಮತ್ತು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟಕ್ಕೂ ಇದಕ್ಕೆ ಬಿಜೆಪಿ ವಿರೋಧಿಸುತ್ತಿರುವುದು ಯಾಕೆ?
ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿ, ಉಪಜಾತಿಗಳಿಲ್ಲ. ಆದರೆ ಈಗ ಕರ್ನಾಟಕ ಸರ್ಕಾರ ನಡೆಸಲುದ್ದೇಶಿಸಿರುವ ಜಾತಿ ಸಮೀಕ್ಷೆ ಕಾಲಂನಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಹಿಂದೂ ಧರ್ಮದ ಉಪಜಾತಿಗಳಾದ ಕುರುಬ, ದಲಿತ, ಲಿಂಗಾಯತ ಎಂದೆಲ್ಲಾ ಉಪಜಾತಿಗಳನ್ನು ಸೇರಿಸಲಾಗಿದೆ.
ಕುರುಬ ಕ್ರಿಶ್ಚಿಯನ್, ದಲಿತ ಕ್ರಿಶ್ಚಿಯನ್ ಎಂದೆಲ್ಲಾ ಹೊಸದಾಗಿ ಸೇರ್ಪಡೆಗೊಳಿಸಲಾಗಿರುವ ಜಾತಿಗಳು. ಇದಕ್ಕೆ ಬಿಜೆಪಿ ಮತ್ತು ಹಿಂದೂಗಳಿಂದ ವಿರೋಧ ವ್ಯಕ್ತವಾಗಿದೆ. ಇದರಿಂದ ಹಿಂದೂಗಳ ಜನ ಸಂಖ್ಯೆ ಕಡಿಮೆಯಾಗಿದೆ ಎಂದು ಫಲಿತಾಂಶ ಬರುವ ಸಾಧ್ಯತೆಯಿದ್ದು, ಇದರಿಂದ ಹಿಂದೂಗಳ ಪ್ರಾಬಲ್ಯ ಕಡಿಮೆಯಾಗುವುದು ಎನ್ನುವುದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೊಂದು ಈಗ ಸೇರಿಸಲಾಗಿರುವ ದಲಿತ, ಕುರುಬ ಜಾತಿ ವರ್ಗದವರಿಗೆ ಮೀಸಲಾತಿಯಿದೆ. ಈಗ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತ, ಕುರುಬ ಇತ್ಯಾದಿ ವರ್ಗದ ಜನರು ಮತಾಂತರವಾಗಿದ್ದರೂ ಮೀಸಲಾತಿ ಪಡೆಯಬಹುದು. ಅತ್ತ ಧರ್ಮ ಕ್ರಿಶ್ಚಿಯನ್ ಆದರೆ ಮೀಸಲಾತಿ ಮಾತ್ರ ಹಿಂದೂಗಳ ಉಪಜಾತಿಗೆ ಸೇರುವ ಮೀಸಲಾತಿಯಲ್ಲಿ ಬರಲಿದೆ. ಇದರಿಂದ ಮೀಸಲಾತಿ ಪಡೆಯುವ ಹಿಂದುಳಿದ ವರ್ಗದ ಹಿಂದೂ ಉಪಜಾತಿಯವರಿಗೆ ಅನ್ಯಾಯವಾಗಲಿದೆ ಎನ್ನುವುದು ಬಿಜೆಪಿ ಹಾಗೂ ಹಿಂದೂಗಳ ವಿರೋಧಕ್ಕೆ ಕಾರಣವಾಗಿದೆ. ಆದರೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಮತಾಂತರಗೊಂಡರೆ ಆ ಧರ್ಮದವರೆಂದೇ ಪರಿಗಣಿಸುತ್ತೇವೆ ಎಂದಿದ್ದಾರೆ. ಆದರೆ ಮೀಸಲಾತಿ ಮುಂದುವರಿಯುತ್ತದೆಯೇ ಅಥವಾ ಆ ಧರ್ಮದ ಆಧಾರದಲ್ಲಿಯೇ ಅವರನ್ನು ಪರಿಗಣಿಸಲಾಗುತ್ತದೆಯೇ ಎಂದು ಮುಂದಿನ ದಿನಗಳಲ್ಲಷ್ಟೇ ನಿರ್ಧಾರವಾಗಲಿದೆ.