Publish Date: Fri, 12 Sep 2025 (14:13 IST)
Updated Date: Fri, 12 Sep 2025 (14:15 IST)
ಬೆಂಗಳೂರು: ಇಂದು ಜಾತಿಗಣತಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಈ ವೇಳೆ ವಿವಾದಿತ ಕ್ರಿಶ್ಚಿಯನ್ ಉಪಜಾತಿ ಕಾಲಂ ಬಗ್ಗೆ ಪ್ರಶ್ನಿಸಿದಾಗ ಅವರು ಹೇಳಿದ್ದೇನು ನೋಡಿ.
ಜಾತಿಗಣತಿ ಕಾಲಂನಲ್ಲಿ ಕ್ರಿಶ್ಚಿಯನ್ ಸಮುದಾಯದಲ್ಲಿ ಹಲವು ಉಪಜಾತಿಗಳನ್ನು ಸೇರಿಸಲಾಗಿದೆ. ಕ್ರಿಶ್ಚಿಯನ್ ರೆಡ್ಡಿ, ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ದಲಿತ, ಕ್ರಿಶ್ಚಿಯನ್ ಕುರುಬ ಎಂದು ಹಿಂದೂ ಪಂಗಡಗಳನ್ನು ಕ್ರಿಶ್ಚಿಯನ್ ಪಂಗಡಳ ಸಾಲಿನಲ್ಲಿ ಸೇರಿಸಲಾಗಿದೆ.
ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದು ಹಿಂದೂಗಳ ಸಂಖ್ಯೆ ಕಡಿಮೆ ಮಾಡುವ ಕಾಂಗ್ರೆಸ್ ಯತ್ನ ಎಂದು ಬಿಜೆಪಿ ಆರೋಪಿಸಿತ್ತು. ಕ್ರಿಶ್ಚಿಯನ್ ರಲ್ಲಿ ಯಾವಾಗ ಬ್ರಾಹ್ಮಣ, ದಲಿತ ಜಾತಿ ಎಲ್ಲಾ ಬಂತು ಎಂದು ಹಲವರು ಪ್ರಶ್ನೆ ಮಾಡಿದ್ದರು.
ಈ ವಿವಾದದ ಬಗ್ಗೆ ಇಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಕ್ರಿಶ್ಚಿಯನ್ ದಲಿತರು, ಕುರುಬರೂ ನಾಗರಿಕರೇ. ಮತಾಂತರ ಆಗಿರುವ ಕಾರಣಕ್ಕೆ ಅವರಿಗೆ ಸಿಗಬೇಕಾದ ಸೌಲಭ್ಯದಿಂದ ವಂಚಿತರಾಗಬಾರದು. ಆ ಕಾರಣಕ್ಕೆ ಪ್ರತ್ಯೇಕ ಕಾಲಂ ಸೇರಿಸಲಾಗಿದೆ ಎಂದಿದ್ದಾರೆ. ಇನ್ನು, ಲಿಂಗಾಯತ ಪ್ರತ್ಯೇಕ ಧರ್ಮದ ಕಾಲಂ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು ವೀರಶೈವ ಧರ್ಮ ಅಥವಾ ಲಿಂಗಾಯತ ಧರ್ಮ ಎಂದು ಏನು ಬೇಕಾದರೂ ಬರೆಸಲಿ. ನಮಗೆ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಗೊತ್ತಾಗಬೇಕು ಎಂದಿದ್ದಾರೆ.