ಬೆಂಗಳೂರು: ಕರ್ನಾಟಕ ಸರ್ಕಾರ ಜಾತಿಗಣತಿ ಮಾಡಲು ಮುಂದಾಗಿದ್ದು ಇದಕ್ಕೆ 425 ಕೋಟಿ ರೂ ಖರ್ಚು ಮಾಡಲಿದೆ. ಈ ವರದಿಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು ಈ ಹಣ ಹಿಂದನಂತೆ ದುರುಪಯೋಗದೇ ಉಪಯೋಗವಾದರೆ ಸಾಕು ಎಂದಿದ್ದಾರೆ.
10 ವರ್ಷಗಳ ಹಿಂದೆ ಜಾತಿಗಣತಿಯಾಗಿದ್ದಾಗ 165 ಕೋಟಿ ರೂ. ಖರ್ಚಾಗಿತ್ತು. ಅದು ಬೇಡವೆಂದು ಹೈಕಮಾಂಡ್ ಹೇಳಿದ್ದಕ್ಕೆ ಕಾಂಗ್ರೆಸ್ ಸರ್ಕಾರ ಈಗ ಹೊಸದಾಗಿ ಜಾತಿಗಣತಿ ಮಾಡಲು ಮುಂದಾಗಿದೆ. ಇದಕ್ಕೆ 425 ಕೋಟಿ ರೂ ಖರ್ಚಾಗಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿವೈ ವಿಜಯೇಂದ್ರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ₹165 ಕೋಟಿ ವ್ಯಯಿಸಿ ಕಾಂತರಾಜು ಆಯೋಗ ನಡೆಸಿದ್ದ ಜಾತಿ ಗಣತಿಯನ್ನು 10 ವರ್ಷಗಳ ಹಳೆಯದು ಎಂಬ ಕಾರಣ ನೀಡಿ ಕಸದ ಬುಟ್ಟಿಗೆ ಹಾಕಿದೆ. ಇದೀಗ ಮತ್ತೆ ₹425 ಕೋಟಿ ರೂ ವ್ಯಯಿಸಿ ಜಾತಿ ಗಣತಿ ನಡೆಸಲು ಮುಂದಾಗಿದೆ. ಮುಖ್ಯಮಂತ್ರಿಗಳೇ, ಕಾಂತರಾಜು ಆಯೋಗದ ವರದಿಯಂತೆ ಇದೂ ಕೂಡ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಳ್ಳುವ ಸಾಧನವಾಗದಿರಲಿ.
ಅತ್ಯಲ್ಪ ಅವಧಿಯಲ್ಲಿ 7 ಕೋಟಿ ಜನರ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯನ್ನು ತಯಾರಿಸುವುದಾಗಿ ಹೇಳಿದ್ದೀರಿ ಆದರೆ ಕೇವಲ ಪರಿಶಿಷ್ಟರ ಜಾತಿಗಣತಿ ನಡೆಸಲು ನಾಗಮೋಹನ್ ದಾಸ್ ಆಯೋಗವು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಪಡೆದಿತ್ತು, ಈಗ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ತಾಂತ್ರಿಕತೆ ಬಳಸಿಯಾದರೂ ಹೇಗೆ ಸಾಧ್ಯ? ಎಂಬ ಪ್ರಶ್ನೆ ಜನರಲ್ಲಿ ಮೂಡಿರುವುದು ಸಹಜವೆ.
ಕಾಂತರಾಜು ಆಯೋಗಕ್ಕೆ ವ್ಯಯಿಸಿದ್ದ ₹165 ಕೋಟಿ ರೂ ನಂತೆ ಈಗಿನ ₹425 ಕೋಟಿ ರೂ. ಹಣ ನೀರಿಗೆ ಹೋಮವಾಗದಿರಲಿ ಎಂದಿದ್ದಾರೆ.