Publish Date: Wed, 02 May 2018 (13:34 IST)
Updated Date: Wed, 02 May 2018 (13:36 IST)
ಈ ಬಾರಿಯ ಚುನಾವಣೆ ಬಹಳ ಮಹತ್ತರವಾದದ್ದು ಪ್ರಧಾನಿ ಮೋದಿ ಇವತ್ತು ರಾಜ್ಯಕ್ಕೆ ಬಂದಿದ್ದಾರೆ. ಈ ಹಿಂದೆ ಬಂದಾಗ ನಾನು ಕನ್ನಡಿಗ ಅಂದಿದ್ದರು. ಆದ್ರೆ ಪ್ರಧಾನಿಯಾದ ಮೇಲೆ ರಾಜ್ಯಕ್ಕೆ ಇವರು ಏನು ಕೊಡುಗೆ ನೀಡಿದ್ದಾರೆ ಅಂತಾ ಮುಖ್ಯಮಂತ್ರಿ ಸಿದ್ಧರಾಮಯ್ಯ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಮೋದಿ ವಿರುದ್ಧ ಗುಡುಗಿದರು.
ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರಕ್ಕೆ ಆಗಮಿಸಿದ ವೇಳೆ ಮೋದಿ ವಿರುದ್ಧ ಹರಿಹಾಯ್ದರು. ನಾನು ಎರಡು ನಿಯೋಗಗಳನ್ನು ತೆಗೆದುಕೊಂಡು ಕೇಂದ್ರಕ್ಕೆ ಹೋಗಿದ್ದೆ, ಮಹಾದಾಯಿ ವಿವಾದ ಇತ್ಯರ್ಥಗೊಳಿಸಲು ಬೇಡಿಕೊಂಡಿದ್ದೆ, ಅವರು ಮದ್ಯ ಪ್ರವೇಶ ಮಾಡಲು ಒಪ್ಪಿಕೊಳ್ಳಲಿಲ್ಲ. ತೆಲುಗು ಗಂಗಾ ಯೋಜನೆಯನ್ನು ಇಂದಿರಾ ಗಾಂಧಿ ಇತ್ಯರ್ಥ ಮಾಡಿದ್ದರು. ಅದರ ಉದಾಹರಣೆಯನ್ನು ನಾನು ಮೋದಿಯವರಿಗೆ ಹೇಳಿದ್ದೆ. ಆದ್ರೆ ಅವರು ಯಾವುದಕ್ಕೂ ಒಪ್ಪಲಿಲ್ಲ,
ಇನ್ನೂ ಬರಗಾಲಕ್ಕೆ ಸಂಬಂಧಿಸಿದ ನಿಯೋಗ ರೈತರ ಸಾಲವನ್ನು ಮನ್ನಾ ಮಾಡುವಂತೆ ಮನವಿ ನೀಡಿದೆ. ಆದ್ರೆ ರೈತ ಸಾಲ ಮನ್ನಾ ಮಾಡಿದರೆ ದೇಶದ ಆರ್ಥಿಕ ಸ್ಥಿತಿ ಹಾಳಾಗಿ ಹೋಗುತ್ತೆ ಅಂದ್ರು. ಇವತ್ತು ಮೋದಿ ಅವರು ಚಾಮರಾಜನಗರಕ್ಕೆ ಹೋಗಿಲ್ಲ. ಪ್ರಧಾನಿ ಪಟ್ಟ ಹೋಗುತ್ತೆ ಅನ್ನೋ ಭಯ ಅವರಿಗೆ. ಹಾಗಾಗಿ ನಾನು ಈ ಕಳಂಕ ಹೋಗಲಿ ಅಂತಾ ಎಂಟು ಬಾರಿ ಅಲ್ಲಿಗೆ ಹೋದೆ.
ಹೀಗೆ ಹೋಗಿದ್ದಕ್ಕೆ ಐದು ವರ್ಷ ಪೂರ್ಣಗೊಳಿಸಿದೆ. ಅದ್ರೆ ಮೋದಿ ತಮ್ಮ ಕುರ್ಚಿಗೆ ಕಳಂಕ ಬರುತ್ತೆ ಅಂತಾ ಅಲ್ಲಿಗೆ ಹೋಗಲಿಲ್ಲ. ಇವತ್ತು ದೇವೆಗೌಡರನ್ನು ಮೋದಿ ಹಾಡಿ ಹೊಗಳಿದ್ದಾರೆ. ಇಬ್ಬರೂ ಒಳ ಒಪ್ಪಂದ ಮಾಡಿಕೊಂಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಇದೇ ಮೋದಿ ದೇವೇಗೌಡರನ್ನ ವೃದ್ಧಾಶ್ರಮಕ್ಕೆ ಕಳಿಸಿ ಅಂದಿದನ್ನ ನಾನು ಮರೆತಿಲ್ಲ. ಆದರೆ ಇವತ್ತು ನೋಡಿದ್ರೆ ಅದೇ ಗೌಡರನ್ನ ಹೊಗಳ್ತಾರೆ. ಹಾಗಾದರೆ ಇಬ್ಬರೂ ಒಳ ಒಪ್ಪಂದ ಮಾಡಿಕೊಂಡಿದ್ದು ಸುಳ್ಳಾ ಅಂತಾ ಬಿಜೆಪಿಗೆ ಲೇವಡಿ ಮಾಡಿದರು.