Publish Date: Wed, 22 Aug 2018 (15:09 IST)
Updated Date: Wed, 22 Aug 2018 (15:14 IST)
ಮೈಸೂರು: ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಕೆಟ್ಟದ್ದಾಗಿ ಕಮೆಂಟ್ ಮಾಡುವವರಿಗೆ ಸಂಸದ ಪ್ರತಾಪ್ ಸಿಂಹ ಫೇಸ್ ಬುಕ್ ಲೈವ್ ನಲ್ಲೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
`ಬಾಯಿ ಬಂದ ಹಾಗೆ ಕಮೆಂಟ್ ಮಾಡೋದು ಸರಿಯಲ್ಲ. ನನಗೂ ಎಲ್ಲಾ ಭಾಷೆಯಲ್ಲೂ ಬೈಯೋಕೆ ಬರುತ್ತೆ. ಉತ್ತರ ಕರ್ನಾಟಕ, ತುಳು ಭಾಷೆಯಲ್ಲೂ ನಾನು ಮಾತಾಡುತ್ತೇನೆ. ಆದರೆ ನನಗೆ ನಿಮ್ಮ ಸಂಸ್ಕೃತಿ ಇಲ್ಲ. ಎಲ್ಲರಿಗೂ ಒಂದೊಂದು ಪಕ್ಷ ಇರುತ್ತೆ. ಹಾಗಂತ ಬಾಯಿಗೆ ಬಂದ ಹಾಗೇ ಇನ್ನೊಬ್ಬರನ್ನು ಟೀಕಿಸಬಾರದು. ನೀವು ಮಾತಾಡುವ ಭಾಷೆಯನ್ನ ನನಗೆ ಮಾತನಾಡಕ್ಕೆ ಬರುತ್ತೆ. ಆದರೆ ಅದು ಅಸಹ್ಯ ಆಗುತ್ತೆ. ಟೀಕೆ ಮಾಡಿ ಮಾತಾಡಬಾರದು ಅಂತಲ್ಲ. ಒಳ್ಳೆಯ ಭಾಷೆಯಲ್ಲಿ ಟೀಕೆ ಮಾಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.
‘ಕೊಡಗು ಕೊಚ್ಚಿ ಹೋಗುತ್ತಿದೆ, ಪ್ರತಾಪ್ ಸಿಂಹ ಎಲ್ಲಿ ಅಂತೀರಲ್ಲ. ನಾನು ಮಳೆ ಪ್ರಾರಂಭವಾದಗಿನಿಂದಲೂ ಕೊಡಗಿನಲ್ಲೇ ಇದ್ದೇನೆ. ನಾನು ಹಾಗೂ ನನ್ನ ಕಾರ್ಯಕರ್ತರು ಅವರ ನೆರವಿಗೆ ಧಾವಿಸಿದ್ದೇವೆ. ಮೊದಲು ನಾವೇ ಅಲ್ಲಿ ಪರಿಹಾರ ಕೇಂದ್ರ ತೆರೆದಿದ್ದು. ಈಗಲೂ ನಾವು ಇಲ್ಲೇ ಇದ್ದು ಅವರ ಬೆಂಬಲಕ್ಕೆ ನಿಂತಿದ್ದೇವೆ. ಇನ್ನಾದರೂ ಅವಾಚ್ಯ ಶಬ್ಧ ಬಳಕೆ ಮಾಡದೇ ಒಳ್ಳೆಯ ಶಬ್ಧಗಳಿಂದ ಟೀಕೆ ಮಾಡಿ. ನನಗೂ ಆ ರೀತಿ ಮಾತಾಡೋಕೆ ಬರುತ್ತೆ’ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.