Publish Date: Sun, 15 May 2022 (07:45 IST)
Updated Date: Sat, 14 May 2022 (22:15 IST)
ಉಡುಪಿ: ಉಡುಪಿಯ ಕೃಷ್ಣ ಮಠದಲ್ಲಿ ಕೃಷ್ಣ ದೇವರ ತೊಟ್ಟಿಲು ಪೂಜೆ ನೋಡುತ್ತಿದ್ದ ಮಹಿಳೆಯೊಬ್ಬರ ಬ್ಯಾಗಿನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳುವಾಗಿರು ಪ್ರಕರಣ ನಡೆದಿದೆ. ಬೆಂಗಳೂರಿನ ಅತ್ತಿಬೆಲೆ ಮೂಲದ ಷಣ್ಮುಗಂ ಅವರ ಕುಟುಂಬ, ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ನಂತರ ಕೃಷ್ಣಮಠದ ವಸಂತ ಮಂಟಪದ ಬಳಿ ತೊಟ್ಟಿಲು ಸೇವೆ ವೀಕ್ಷಿಸುತ್ತಿದ್ದರು. ಈ ವೇಳೆ ದೇವರ ಆರತಿ ಪಡೆಯುವಾಗ ಕಳ್ಳರು ಷಣ್ಮುಗಂ ರವರ ಹೆಂಡತಿಯ ವ್ಯಾನಿಟಿ ಬ್ಯಾಗ್ನಲ್ಲಿದ್ದ ಚಿನ್ನಾಭರಣದ ಬಾಕ್ಸ್ ನ್ನು ಕಳವು ಮಾಡಿದ್ದಾರೆ.
ಬಾಕ್ಸ್ ನಲ್ಲಿ 58 ಗ್ರಾಂ ತೂಕದ ಬಳೆಗಳು, 2.16 ಗ್ರಾಂ ತೂಕದ ಕಿವಿಯೊಲೆ, 2.13 ಗ್ರಾಂ ತೂಕದ ಮಗುವಿನ ಚಿಕ್ಕ ಬಳೆ, 1.20 ಗ್ರಾಂ ತೂಕದ ಪೆಂಡೆಂಟ್ ಇರುವ ಚಿನ್ನದ ಸರ, 1.48 ಗ್ರಾಂ ತೂಕದ ದೊಡ್ಡ ಚಿನ್ನದ ಸರ1 ಹೀಗೆ ಒಟ್ಟು 155 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದೆ. ಕಳುವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೊತ್ತ 6,30,000 ಮೌಲ್ಯ ರೂಪಾಯಿ ಎಂದು ತಿಳಿದುಬಂದಿದೆ .ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಪ್ರವಾಸಿಗರು ಹೆಚ್ಚಾಗಿ ಬರುವ ಸಮಯ ಮತ್ತು ಸ್ಥಳವನ್ನೇ ಚೋರರು ಆಯ್ಕೆ ಮಾಡಿಕೊಳ್ಳುತ್ತಾರೆ. ಸಮುದ್ರತೀರ ಗಳಿರಬಹುದು ದೇವಸ್ಥಾನ ಗಳಿರಬಹುದು ಹೆಚ್ಚಾಗಿ ಜನ ಸೇರುವ ಪ್ರದೇಶದಲ್ಲಿ ತಮ್ಮ ಕರಾಮತ್ತು ತೋರಿಸುತ್ತಾರೆ. ಹಾಗಾಗಿ ಪ್ರವಾಸದ ಸಂದರ್ಭದಲ್ಲಿ ಆದಷ್ಟು ಕಡಿಮೆ ಆಭರಣ ಹಾಗೂ ನಗದನ್ನು ಇಟ್ಟುಕೊಳ್ಳಿ ಎಂದು ಪೊಲೀಸರು ಎಚ್ಚರಿಸಿದ್ದಾರೆ