Publish Date: Sun, 15 May 2022 (07:30 IST)
Updated Date: Sat, 14 May 2022 (21:50 IST)
ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಶತಾಯಗತಾಯವಾಗಿ ಅಧಿಕಾರ ಹಿಡಿಯಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಇದಕ್ಕೆ ಪೂರಕವೆಂಬಂತೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಎಲ್ಲಿ ಬಿಜೆಪಿ ಹವಾ ಇಲ್ಲವೋ ಅಲ್ಲಿ ಆಪರೇಷನ್ ಕಮಲ ಮಾಡುತ್ತಿದೆ.
ಅದರಲ್ಲೂ ಪ್ರಮುಖವಾಗಿ ಈ ಬಾರಿ ಬಿಜೆಪಿ ಹಳೇ ಮೈಸೂರು ಭಾಗಕ್ಕೆ ಹೆಚ್ಚು ಒತ್ತು ನೀಡಿದ್ದು, ಈ ಭಾಗದಲ್ಲಿ ಪ್ರಮುಖ ಬೇರೆ ಪಕ್ಷದ ನಾಯಕರನ್ನು ಸೆಳೆಯಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲದ ಬಗ್ಗೆ ಸ್ವತಃ ಸಚಿವ ಎಸ್ಟಿ ಸೋಮಶೇಖರ್ ಸುಳಿವು ನೀಡಿದ್ದು, 2ನೇ ಹಂತದ ಆಪರೇಷನ್ಗೆ ಕಮಲ ಫಿಕ್ಸ್ ಆಗಿದ್ದು, ಶೀಘ್ರದಲ್ಲೇ ಈ ಭಾಗದ ಘಟಾನುಘಟಿ ನಾಯಕರು ಬಿಜೆಪಿಗೆ ಸೇರ್ಪಡೆಯಾಲಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್, ಜೆಡಿಎಸ್ನ ಪ್ರಮುಖ ನಾಯಕರು ಬಿಜೆಪಿ ಸೇರಲಿದ್ದಾರೆ. ಆ ನಾಯಕರು ಯಾರೆಂದು ಈಗಲೇ ಹೇಳಲಾಗಲ್ಲ. ಅಂತಹ ನಾಯಕರ ಜೊತೆ ಕೊನೆ ಹಂತದ ಮಾತುಕತೆ ನಡೆಯುತ್ತಿದೆ. ಯಾವುದೇ ಷರತ್ತುಗಳಿಲ್ಲದೇ ಪಕ್ಷ ಸೇರಲು ನಾಯಕರು ಒಪ್ಪಿದ್ದಾರೆ. ಪಕ್ಷ ಸೇರಲು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಅನುಮತಿ ಬಾಕಿಯಿದೆ ಎಂದು ಹೇಳಿದರು.
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಹೇಳಿದ್ದಾರೆ. ಅಲ್ಲದೇ ಜಿಟಿಡಿ ಪುತ್ರನಿಗೆ ಕ್ಷೇತ್ರ ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ.
ಜಿಟಿಡಿ ಪುತ್ರನಿಗೆ ಟಿಕೆಟ್ ನೀಡಲು ಹೈಕಮಾಂಡ್ನಿರ್ಧರಿಸಿದರೆ ಚಾಮರಾಜ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಬಿಜೆಪಿ ಬಂದು ಈ ಭಾಗದಲ್ಲಿ 8 ಸ್ಥಾನ ಗೆಲ್ಲಿಸೋದಾದ್ರೆ, ಪಕ್ಷಕ್ಕಾಗಿ ಕ್ಷೇತ್ರ ಸೇರಿದಂತೆ ಯಾವುದೇ ತ್ಯಾಗಕ್ಕೂ ನಾನು ಸಿದ್ಧ. ಬಿಜೆಪಿಗೆ ಘಟಾನುಘಟಿ ನಾಯಕರು ಸೇರುತ್ತಾರೆ ಎಂದು ಸಚಿವ ಸೋಮಶೇಖರ್ ಹೇಳಿಕೆಗೆ ಶಾಸಕ ನಾಗೇಂದ್ರ ಪುಷ್ಟಿ ನೀಡಿದ್ದಾರೆ.