Publish Date: Mon, 08 Dec 2025 (09:00 IST)
Updated Date: Mon, 08 Dec 2025 (09:03 IST)
ಬೆಂಗಳೂರು: ರಾಜ್ಯದಲ್ಲಿ ಕುಸ್ತಿ ಕದನ ತಣ್ಣಗಾಗಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಇಂದಿನಿಂದ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಲಿದೆ.
ಇಂದಿನಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆ ಮಾಡಲು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನ ಸಿದ್ದರಾಮಯ್ಯ ಮತ್ತು ಸರ್ಕಾರದ ಪಾಲಿಗೆ ಸವಾಲಿನದ್ದಾಗಿದೆ.
ಯಾಕೆಂದರೆ ಈ ಬಾರಿ ವಿಪಕ್ಷಗಳಿಗೆ ಸರ್ಕಾರದ ವಿರುದ್ಧ ಮುಗಿಬೀಳಲು ಸಾಕಷ್ಟು ಅಸ್ತ್ರಗಳಿವೆ. ಸಿಎಂ, ಡಿಸಿಎಂ ದುಬಾರಿ ವಾಚ್ ಪ್ರಕರಣ, ಕಾಂಗ್ರೆಸ್ ನಲ್ಲಿರುವ ಅಧಿಕಾರ ಹಂಚಿಕೆ ತಿಕ್ಕಾಟ, ರೈತರ ಸಮಸ್ಯೆಗಳು ಸೇರಿದಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧತೆ ನಡೆಸಿದೆ.
ಈಗಾಗಲೇ ಸಿಎಂ ಸಿದ್ದರಾಮಯ್ಯನವರು ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರ ಕೊಡಲು ಸಜ್ಜಾಗುವಂತೆ ತಮ್ಮ ಸಚಿವರಿಗೆ ಸೂಚನೆ ನೀಡಿದ್ದಾರೆ. ಎಲ್ಲರೂ ಸದನಕ್ಕೆ ಹಾಜರಾಗಲು ಖಡಕ್ ಸೂಚನೆ ಕೊಟ್ಟಿದ್ದಾರೆ. ಕಾಂಗ್ರೆಸ್ ನೊಳಗಿನ ರಾಜಕೀಯವೇನೇ ಇರಲಿ, ಈಗ ಅದೆಲ್ಲವನ್ನೂ ಬದಿಗೊತ್ತಿ ಎಲ್ಲಾ ನಾಯಕರು ಒಟ್ಟಾಗಿ ವಿಪಕ್ಷವನ್ನು ಎದುರಿಸಬೇಕಾದ ಸವಾಲು ಈಗ ಸಿದ್ದರಾಮಯ್ಯನವರ ಮೇಲಿದೆ.