ಬೆಂಗಳೂರು: ಎರಡು ಮಹತ್ವದ ನಿರ್ಧಾರ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಕಾರ್ಯಾಚರಣೆ ಶುರು ಮಾಡಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕದನ ಇನ್ನೂ ಚಾಲ್ತಿಯಲ್ಲಿದೆ. ಡಿಕೆ ಶಿವಕುಮಾರ್ ಬಣ ಇನ್ನಿಲ್ಲದಂತೆ ಪ್ರಯತ್ನ ಪಡುತ್ತಿದ್ದಾರೆ. ಇದರ ನಡುವೆ ಇದೇ ವಾರ ದೆಹಲಿಯಲ್ಲಿ ಎಐಸಿಸಿ ಕಾರ್ಯಕಾರಿಣಿ ನಡೆಯಲಿದ್ದು, ಈ ವೇಳೆ ರಾಹುಲ್ ಗಾಂಧಿಯವರನ್ನು ರಾಜ್ಯ ನಾಯಕರು ಭೇಟಿ ಮಾಡುವ ಸಾಧ್ಯತೆಯಿದೆ.
ಇದರ ನಡುವೆ ಸಿದ್ದರಾಮಯ್ಯ ಬುಲಾವ್ ನೀಡದೇ ಹೈಕಮಾಂಡ್ ನಾಯಕರನ್ನು ಭೇಟಿಯಾಗದೇ ಇರಲು ತೀರ್ಮಾನಿಸಿದ್ದಾರೆ. ಆದರೆ ಅವರ ಬೆಂಬಲಿಗರು ಮಾತ್ರ ಯಾವುದೇ ಕಾರಣಕ್ಕೂ ಸಿಎಂ ಸ್ಥಾನ ಕೈ ತಪ್ಪದಂತೆ ಯೋಜನೆ ರೂಪಿಸಿದ್ದಾರೆ.
ರಾಜ್ಯದಲ್ಲಿ ಅಹಿಂದ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಸಮಾವೇಶವನ್ನು ಎರಡು ಉದ್ದೇಶ ಇಟ್ಟುಕೊಂಡು ಮಾಡಲಾಗುತ್ತಿದೆ. ಒಂದು ವೇಳೆ ಸಿದ್ದರಾಮಯ್ಯಗೆ ಸಿಎಂ ಸ್ಥಾನ ಕೈ ತಪ್ಪಿದರೆ ಇದೇ ಸಮಾವೇಶವನ್ನು ಹೋರಾಟವಾಗಿಸುವ ಉದ್ದೇಶ ಬೆಂಬಲಿಗರಿಗಿದೆ. ಇಲ್ಲವೇ ಸಿದ್ದರಾಮಯ್ಯ ಅವರ ಪರವಾಗಿ ಬೃಹತ್ ಸಮಾವೇಶ ನಡೆಸುವ ಉದ್ದೇಶ ಹೊಂದಿದ್ದಾರೆ. ಈ ಮೂಲಕ ಹೈಕಮಾಂಡ್ ಗೆ ಎಚ್ಚರಿಕೆಯ ಸಂದೇಶ ರವಾನಿಸಲು ಹೊರಟಿದ್ದಾರೆ.