ಬೆಂಗಳೂರು: ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಈಗ ಹೊಸ ರಣತಂತ್ರ ಹೆಣೆಯುತ್ತಿದ್ದಾರೆ. ಅವರ ಈ ಹೊಸ ವೈಖರಿ ಸಿದ್ದು ಬಣದ ನಿದ್ದೆಗೆಡಿಸೋದು ಖಂಡಿತಾ.
ಸಿಎಂ ಪಟ್ಟಕ್ಕಾಗಿ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹಾಕಿದ್ದಾಗಿದೆ. ತಮ್ಮ ಆಪ್ತ ಬಣದ ಮೂಲಕ ಹೇಳಿಸಿದ್ದಾರೆ. ಆಪ್ತರ ಜೊತೆ ಸಭೆ ನಡೆಸಿ ಒತ್ತಡ ತಂದಿದ್ದಾರೆ. ಆದರೆ ಯಾವುದಕ್ಕೂ ಹೈಕಮಾಂಡ್ ಬಗ್ಗುತ್ತಿಲ್ಲ.
ಇದಕ್ಕೆ ಮುಖ್ಯ ಕಾರಣ ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಂಡರೆ ಸರ್ಕಾರ ಉಳಿಯಲ್ಲ ಎನ್ನುವ ಭಯ ಹೈಕಮಾಂಡ್ ಗಿದೆ. ಇದು ಡಿಕೆ ಶಿವಕುಮಾರ್ ಗೂ ಚೆನ್ನಾಗಿಯೇ ಗೊತ್ತು. ಹೀಗಾಗಿ ಈಗ ಸಿಎಂ ಆಪ್ತ ಬಣದಲ್ಲಿರುವ ನಾಯಕರನ್ನು ಭೇಟಿ ಮಾಡಿ ಅವರ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಸಿಎಂ ಆಪ್ತರಾದ ಕೆಎನ್ ರಾಜಣ್ಣ, ಸತೀಶ್ ಜಾರಕಿಹೊಳಿ ಭೇಟಿ ಮಾಡಿದ್ದಾರೆ. ರಾಜಣ್ಣ ನನಗೂ ಸ್ನೇಹಿತರು ಎಂದಿದ್ದಾರೆ. ಆ ಮೂಲಕ ಸಿಎಂ ಆಪ್ತರನ್ನೂ ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸಿಎಂ ಕುರ್ಚಿಗೆ ಹತ್ತಿರವಾಗುವ ತಂತ್ರ ಮಾಡಿದ್ದಾರೆ.