Publish Date: Sat, 29 Nov 2025 (11:58 IST)
Updated Date: Sat, 29 Nov 2025 (12:00 IST)
ಬೆಂಗಳೂರು: ಇಂದು ಹೈಕಮಾಂಡ್ ಅಣತಿ ಮೇರೆಗೆ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ಈ ಮೀಟಿಂಗ್ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಇದೊಂದು ವಿಚಾರಕ್ಕೆ ಉಭಯ ನಾಯಕರು ಸ್ಪಷ್ಟ ಉತ್ತರ ಕೊಡಲೇ ಇಲ್ಲ.
ಸಿಎಂ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಬಳಿಕ ಇಬ್ಬರೂ ನಗುಮೊಗದಿಂದಲೇ ಹೊರಗೆ ಬಂದು ಜಂಟಿಯಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ನಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ. ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ. ನಾವು ಜೊತೆಯಾಗಿಯೇ ಸರ್ಕಾರ ಮುನ್ನಡೆಸುತ್ತೇವೆ ಎಂದು ಇಬ್ಬರೂ ಹೇಳಿಕೆ ನೀಡಿದ್ದಾರೆ.
ಆದರೆ ಮಾಧ್ಯಮ ಪ್ರತಿನಿಧಿಗಳು ಈ ವೇಳೆ ನಿಮ್ಮ ನಡುವೆ ಎರಡೂವರೆ ವರ್ಷದ ಒಪ್ಪಂದ ನಡೆದಿರುವುದು ನಿಜವಾ ಎಂದು ಪ್ರಶ್ನೆ ಮಾಡಿವೆ. ಇದಕ್ಕೆ ಡಿಕೆ ಶಿವಕುಮಾರ್ ಯಾವುದೇ ಉತ್ತರ ನೀಡದೇ ನಗುತ್ತಾ ನಿಂತಿದ್ದರು. ಇತ್ತ ಸಿದ್ದರಾಮಯ್ಯನವರು ಯಾವುದೇ ಸ್ಪಷ್ಟ ಉತ್ತರ ಕೊಡದೇ ಜಾರಿಕೊಂಡಿದ್ದಾರೆ.
ನಾವು ಒಟ್ಟಿಗೇ ಸರ್ಕಾರ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದ ಮೇಲೆ ತಿರುಗಾ ಅದೇ ಪ್ರಶ್ನೆ ಕೇಳ್ತೀರಲ್ಲಾ ಎಂದು ಮಾಧ್ಯಮದವರನ್ನೇ ಸಿಎಂ ಗದರಿದರು. ಬಳಿಕ ಹೈಕಮಾಂಡ್ ಹೇಳಿದ ಹಾಗೇ ಒಟ್ಟಿಗೇ ಮುನ್ನಡೆಯುತ್ತೇವೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಪತ್ರಿಕಾಗೋಷ್ಠಿಯನ್ನು ಮುಗಿಸಿದರು. ಕೊನೆಗೂ ಒಪ್ಪಂದ ಹೌದು ಅಥವಾ ಇಲ್ಲ ಎನ್ನುವುದನ್ನು ಇಬ್ಬರೂ ನಾಯಕರೂ ಹೇಳಲೇ ಇಲ್ಲ.