ಬೆಂಗಳೂರು: ಬಾಹ್ಯಾಕಾಶದಿಂದ ಬೆಂಗಳೂರಿಗೆ ಬೇಕಾದರೂ ಸುಲಭವಾಗಿ ಬರಬಹುದು. ಆದರೆ ಮಾರತಹಳ್ಳಿಯಿಂದ ಮಾದಾವರ ತಲುಪುವುದು ಕಷ್ಟ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎದುರೇ ಗಗನಯಾತ್ರಿ ಶುಭಾಂಶು ಶುಕ್ಲ ತಮಾಷೆ ಮಾಡಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಏನೂ ಹೊಸದಲ್ಲ. ಕೆಲವು ದಿನಗಳ ಮೊದಲು ಬೆಂಗಳೂರು ಟ್ರಾಫಿಕ್ ಬಗ್ಗೆ ಸ್ವತಃ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿ ಮಾತನಾಡಿದ್ದರು. ಇದು ಬೆಂಗಳೂರು ಅಭಿವೃದ್ಧಿಯಾಗುತ್ತಿರುವುದರ ಸಂಕೇತ ಎಂದಿದ್ದರು. ಅವರ ಮಾತು ಟೀಕೆಗೆ ಗುರಿಯಾಗಿತ್ತು.
ಇದೀಗ ಸಚಿವರ ಎದುರೇ ಇತ್ತೀಚೆಗೆ ಗಗನಯಾನವನ್ನು ಯಶಸ್ವಿಯಾಗಿ ಮುಗಿಸಿ ಬಂದಿರುವ ಗಗನಯಾತ್ರಿ ಶುಭಾಂಶು ಶುಕ್ಲ ತಮಾಷೆ ಮಾಡಿದ್ದಾರೆ. ನೆಲಮಂಗಲ ಬಳಿ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಶುಭಾಂಶು ಮಾರತ್ತಹಳ್ಳಿಯಿಂದ ಮಾದಾವರಕ್ಕೆ ತಲುಪುವ ಸಮಯಕ್ಕಿಂತ ಬೇಗ ಬಾಹ್ಯಾಕಾಶವನ್ನೇ ತಲುಪಬಹುದು ಎಂದಿದ್ದಾರೆ.
ಇದಕ್ಕೆ ಪ್ರಿಯಾಂಕ್ ಖರ್ಗೆ ಅಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ವೇಳೆ ಶುಭಾಂಶು ಬಾಹ್ಯಾಕಾಶದಿಂದ ನೋಡುವಾಗ ನಮ್ಮ ಭಾರತ ಹೇಗೆ ಕಾಣಿಸುತ್ತದೆ ಎಂದು ವಿಡಿಯೋ ಸಮೇತ ವಿವರಿಸಿದರು.