Publish Date: Mon, 17 Nov 2025 (09:24 IST)
Updated Date: Mon, 17 Nov 2025 (09:30 IST)
ಬೆಂಗಳೂರು: ಚಿತ್ತಾಪುರದದಲ್ಲಿ ಆರ್ ಎಸ್ಎಸ್ ಪಥಸಂಚಲನ ಯಶಸ್ವಿಯಾದ ಬೆನ್ನಲ್ಲೇ ಇತ್ತ ಸೋಷಿಯಲ್ ಮೀಡಿಯಾದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಸಂಘದ ವಿರುದ್ಧ ಕಿಡಿ ಕಾರಿದ್ದಾರೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ನಿಮಗೆ ಆರ್ ಎಸ್ಎಸ್ ಬಿಟ್ಟು ಬೇರೆ ವಿಷಯಗಳೇ ಇಲ್ವಾ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲೇ ಆರ್ ಎಸ್ಎಸ್ ಪಥಸಂಚಲನ ನಡೆಸಿದ ಬೆನ್ನಲ್ಲೇ ಮಾಧ್ಯಮಗಳಲ್ಲಿ ವಾಗ್ದಾಳಿ ನಡೆಸಿದ್ದ ಸಚಿವರು ಇಷ್ಟಕ್ಕೇ ಬಿಡಲ್ಲ, ಆರ್ ಎಸ್ಎಸ್ ಗೆ ಎಲ್ಲಿಂದ ಹಣ ಬರುತ್ತಿದೆ ಎಂಬ ಬಗ್ಗೆಯೂ ತನಿಖೆ ಮಾಡುತ್ತೇವೆ ಎಂದಿದ್ದರು.
ಇಷ್ಟಕ್ಕೇ ಸುಮ್ಮನಾಗದೇ ಆರ್ ಎಸ್ಎಸ್ ಬಗ್ಗೆ ಬಿಜೆಪಿ ಮಾಡಿರುವ ಟ್ವೀಟ್ ರಿಟ್ವೀಟ್ ಮಾಡಿರುವ ಅವರು ಇದೇ ವಿಚಾರವನ್ನು ಕೆದಕಿದ್ದಾರೆ. ಆರ್ ಎಸ್ಎಸ್ ಈ ರೀತಿ ರಹಸ್ಯ ಫಂಡಿಂಗ್ ಎಲ್ಲಿಂದ ಬರುತ್ತಿದೆ ಎಂದೇ ನಾನು ಕೇಳುತ್ತಿರುವುದು ಎಂದಿದ್ದಾರೆ.
ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಆರ್ ಎಸ್ಎಸ್ ಬಿಟ್ಟು ಬೇರೆ ಏನೂ ಇತ್ತೀಚೆಗಿನ ದಿನಗಳಲ್ಲಿ ಮಾತನಾಡ್ತಿಲ್ಲ. ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಯ್ತು ನಿಮ್ಮ ಇಲಾಖೆಯ ಅಭಿವೃದ್ಧಿ ಬಗ್ಗೆ ಗಮನ ಕೊಡಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು ಹಾಗಿದ್ದರೆ ಇಷ್ಟು ವರ್ಷಗಳಲ್ಲಿ ನಿಮ್ಮ ಆದಾಯ ಹೇಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ.